ದಿಲ್ಲಿ ಧಾರ್ಮಿಕ ಸಭೆಗೆ ಹೋಗಿ ಬಂದವರು ಸ್ವಯಂಪ್ರೇರಿತರಾಗಿ ಮಾಹಿತಿ ಕೊಡಿ: ಅಬ್ದುಲ್ ಅಝೀಮ್

ಬೆಂಗಳೂರು, ಎ.18: ಮುಸ್ಲಿಂ ಸಮಯದಾಯದಿಂದ ಲಾಕ್ಡೌನ್ ನಿಯಮಗಳ ಉಲ್ಲಂಘನೆಯಾಗಿಲ್ಲ. ಮುಸ್ಲಿಮರು ಸರಕಾರದ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಹೇಳಿದ್ದಾರೆ.
ಶನಿವಾರ ನಗರದ ಟ್ಯಾನರಿ ರಸ್ತೆಯ ಅರೇಬಿಕ್ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ವಿವಿಧ ಮುಸ್ಲಿಂ ಧಾರ್ಮಿಕ ಗುರುಗಳು, ಉಲಮಾಗಳ ಸಭೆ ನಡೆಸಿದ್ದೇವೆ. ಕೊರೋನ ಸಂಬಂಧ ಹಲವು ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿ ಮಾಡಿದ್ದು, ಸರಕಾರದ ಲಾಕ್ಡೌನ್ ನಿಯಮ ಹಾಗೂ ಪ್ರತಿಯೊಂದು ನಿರ್ದೇಶನಗಳನ್ನು ಮುಸ್ಲಿಂ ಸಮುದಾಯ ಅನುಸರಿಸುತ್ತಿದೆ. ಮುಸ್ಲಿಮರು ಸರಕಾರದ ಜೊತೆ ಕೊರೋನ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.
ಯಾರೂ ಮಸೀದಿಗಳಿಗೆ ಹೋಗುತ್ತಿಲ್ಲ, ಮದುವೆ, ಸಭೆ, ಸಮಾರಂಭ ನಿಷೇಧಿಸಲಾಗಿದೆ. ರಮಝಾನ್ನಲ್ಲೂ ಸಾಮೂಹಿಕ ಪ್ರಾರ್ಥನೆ ನಿಷೇಧ ಮಾಡಲಾಗಿದೆ. ಯಾರಾದರೂ ನಿಧನರಾದಾಗ ಖಬರ್ ಸ್ತಾನಗಳಿಗೂ ಬೆರಳೆಣಿಕೆಯಷ್ಟು ಜನ ಹೋಗುತ್ತಾರೆ. ನೆರೆ ಹೊರೆಯವರನ್ನೂ ಮನೆಗಳಿಗೆ ಆಹ್ವಾನಿಸುತ್ತಿಲ್ಲ. ರಮಝಾನ್ ದಾನಧರ್ಮ ವೇಳೆಯಲ್ಲೂ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದಿಲ್ಲಿಯ ತಬ್ಲೀಗ್ ಜಮಾತ್ ಧಾರ್ಮಿಕ ಸಭೆಗೆ ಹೋಗಿ ಬಂದವರ ಪೈಕಿ 110 ಜನರಿಗೆ ಕೊರೋನ ವೈರಸ್ ಸೋಂಕಿದೆ ಎಂದು ಸರಕಾರ ಹೇಳಿದೆ. ಇನ್ನು ಜಮಾತ್ಗೆ ಹೋಗಿ ಬಂದ ಹಲವರ ವಿವರ ಸಿಗುತ್ತಿಲ್ಲ ಎಂಬ ಆರೋಪ ಇದೆ. ಇಂದಿನಿಂದ ಒಂದು ಅಭಿಯಾನ ಆರಂಭಿಸುತ್ತಿದ್ದೇವೆ. ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ದಿಲ್ಲಿಗೆ ಹೋಗಿದ್ದವರ ವಿವರ ಕೊಡಿ ಎಂದು ಎಲ್ಲ ಮಸೀದಿಗಳಿಗೂ ಇವತ್ತು ಸೂಚನೆ ರವಾನಿಸಲಾಗುತ್ತದೆ. ದಿಲ್ಲಿಗೆ ಹೋಗಿ ಬಂದವರು ಎಷ್ಟು ಜನ, ಎಷ್ಟು ಜನ ಘೋಷಿಸಿಕೊಂಡಿದ್ದಾರೆ, ಎಷ್ಟು ಜನರ ವಿವರ ಸಿಕ್ಕಿಲ್ಲ ಎಂಬುದರ ಮಾಹಿತಿ ಕೇಳುತ್ತಿದ್ದೇವೆ. ಅಲ್ಪ ಸಂಖ್ಯಾತ ಆಯೋಗದ ಅಧಿಕಾರಿಗಳೆಲ್ಲ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಎಷ್ಟೋ ಮಂದಿ ಕೊರೋನ ಭಯದಿಂದ ಹೊರಗೆ ಬಂದಿಲ್ಲ ಎಂಬ ಮಾತಿದೆ. ಅಂಥವರು ಹೆದರುವ ಅಗತ್ಯ ಇಲ್ಲ. ನಿಮಗೆ ಕೊರೋನ ಇರಲಿ ಬಿಡಲಿ. ದಿಲ್ಲಿ ಜಮಾತ್ ಸಭೆಗೆ ಹೋಗಿ ಬಂದವರು ಸ್ವಯಂಪ್ರೇರಿತರಾಗಿ ಬಂದು ತಿಳಿಸಿ. ಕೊರೋನ ವೈರಸ್ ಸೋಂಕು ಧರ್ಮ ನೋಡಿ ಬರುವುದಿಲ್ಲ. ಕೊರೋನ ವೈರಸ್ ಮತ್ತು ಮಾನವರ ನಡುವಿನ ಸಂಘರ್ಷ ಇದು. ನಾವೆಲ್ಲರೂ ಒಟ್ಟಾಗಿ ಕೊರೋನ ವಿರುದ್ಧ ಹೋರಾಡಬೇಕಿದೆ ಎಂದು ತಿಳಿಸಿದರು.
ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇಂದು ನಮ್ಮ ರಕ್ಷಕರಾಗಿದ್ದಾರೆ. ಅವರು ನಮಗಾಗಿ, ನಮ್ಮ ಮನೆ ಸದಸ್ಯರ ಆರೋಗ್ಯ ಪರೀಕ್ಷೆಗಾಗಿ ಬರುತ್ತಾರೆ. ಅವರ ಕೆಲಸಕ್ಕೆ ಎಲ್ಲರೂ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.






.jpg)
.jpg)

