ಮೂವರ ಥಳಿಸಿ ಹತ್ಯೆ ಪ್ರಕರಣ: 110 ಆರೋಪಿಗಳ ಬಂಧನ
ಮುಂಬೈ, ಎ.18: ಮಕ್ಕಳನ್ನು ಅಪಹರಿಸಿ ಕಿಡ್ನಿ ಕದಿಯುವವರು ಎಂಬ ಶಂಕೆಯಲ್ಲಿ ಮೂವರು ವ್ಯಕ್ತಿಗಳ ಮೇಲೆ ಗುಂಪೊಂದು ದಾಳಿ ನಡೆಸಿ ಅವರನ್ನು ಥಳಿಸಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದ್ದು, ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು 110 ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಮೃತರಲ್ಲಿ ಇಬ್ಬರು ಸನ್ಯಾಸಿಗಳಾಗಿದ್ದರೆ, ಒಬ್ಬ 70 ವರ್ಷದ ವೃದ್ಧ. ಸನ್ಯಾಸಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ವೃದ್ಧ ಚಲಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳನ್ನು ಅಪಹರಿಸುವ ಮೂವರ ತಂಡವೊಂದು ವಾಹನದಲ್ಲಿ ಪ್ರಯಾಣಿಸುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಗಡಚಿಂಚಲೆ ಗ್ರಾಮದ ನಿವಾಸಿಗಳು ದೊಣ್ಣೆ ಮತ್ತು ಕಲ್ಲು ಹಿಡಿದುಕೊಂಡು ಸಜ್ಜಾಗಿದ್ದರು. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಅಪರಿಚಿತ ವ್ಯಕ್ತಿಗಳನ್ನು ಕಂಡೊಡನೆ ಅವರ ಮೇಲೆ ದಾಳಿ ನಡೆಸಿ ಥಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ಉದ್ರಿಕ್ತ ಗುಂಪಿನಿಂದ ರಕ್ಷಿಸಿ ತಮ್ಮ ವಾಹನದಲ್ಲಿ ಕುಳ್ಳಿರಿಸಿದಾಗ ಅವರ ಮೇಲೆ ಮತ್ತೊಮ್ಮೆ ಗುಂಪು ದಾಳಿ ನಡೆದಿದೆ. ಈ ಸಂದರ್ಭ ಪೊಲೀಸರೂ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ಉದ್ರಿಕ್ತ ಗುಂಪು ದಾಳಿ ನಡೆಸಿ ಪೊಲೀಸ್ ಜೀಪಿನ ಗಾಜನ್ನು ಒಡೆದುಹಾಕಿ ಜೀಪನ್ನು ಉರುಳಿಸುವ ಘಟನೆಯ ವೀಡಿಯೊ ವೈರಲ್ ಆಗಿದೆ. ವೈರಲ್ ಆಗಿರುವ ಇನ್ನೊಂದು ವೀಡಿಯೊದಲ್ಲಿ , ಅವನನ್ನು ಬಿಡಬೇಡಿ, ಹೊಡೆಯಿರಿ ಎಂಬ ಧ್ವನಿ ಹಾಗೂ ತಲೆಯಿಂದ ರಕ್ತ ಸುರಿಯುತ್ತಿರುವ ವೃದ್ಧನ ಸುತ್ತ ಹಲವರು ದೊಣ್ಣೆ, ಕಲ್ಲು ಮತ್ತಿತರ ಆಯುಧ ಹಿಡಿದುಕೊಂಡು ನಿಂತಿರುವ, ಆ ವೃದ್ಧ ಗುಂಪಿನ ಜನರಿಗೆ ಕೈಮುಗಿದು ಪ್ರಾಣಭಿಕ್ಷೆ ಬೇಡುವ ದೃಶ್ಯವಿದೆ. ವದಂತಿಯನ್ನು ನಂಬಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನನ್ನು ಮೀರಿ ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.