ಖ್ಯಾತ ಸಾಹಿತಿ ಚಂದ್ರಕಾಂತ ಕುಸನೂರು ನಿಧನ

ಬೆಂಗಳೂರು : ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಶನಿವಾರ ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಲಬುರಗಿ ಮೂಲದ ಅವರು ಕೆಲ ದಶಕಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದರು.
ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿ ಹಾಗು ರಂಗಕರ್ಮಿಯಾಗಿದ್ದರು. ಅವರು 1931ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದ್ದರು. ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕಲಬುರಗಿಯಲ್ಲಿ "ರಂಗ ಮಾಧ್ಯಮ" ಎಂಬ ನಾಟಕ ಸಂಸ್ಥೆಯ ಸ್ಥಾಪಕರಾಗಿದ್ದು, ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದ್ದಾರೆ.
1975ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿಯ ಪುರಸ್ಕಾರ ಲಭಿಸಿದೆ. 1992ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ ನೀಡಲಾಗಿದೆ. 2006ನೆ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.
Next Story





