ಕೇಂದ್ರ ಸರಕಾರ ಹೃದಯಹೀನವಾಗಿದೆ: ಚಿದಂಬರಂ

ಹೊಸದಿಲ್ಲಿ, ಎ.19: ಕೋವಿಡ್-19 ಲಾಕ್ಡೌನ್ನ ಸಂದರ್ಭದಲ್ಲಿ ಬಡವರಿಗಾಗಿ ಏನನ್ನೂ ಮಾಡದ ಕೇಂದ್ರ ಸರಕಾರ ಹೃದಯಹೀನವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ರವಿವಾರ ಆರೋಪಿಸಿದರು.
ಬಹಳಷ್ಟು ಜನರ ಕೈಯಲ್ಲಿ ಹಣವಿಲ್ಲದೆ ಹತಾಶರಾಗಿದ್ದಾರೆ. ಉಚಿತ ಆಹಾರ ಪಡೆಯಲು ಉದ್ದನೆಯ ಸರದಿ ಸಾಲಿನಲ್ಲಿ ನಿಂತಿರುವುದು ಇದಕ್ಕೆ ಸಾಕ್ಷಿಯಾಗಿದೆ.ಕೇವಲ ಹೃದಯಹೀನ ಸರಕಾರ ಮಾತ್ರ ಏನನ್ನೂ ಮಾಡದೆ ಈ ರೀತಿ ನಿಂತಿರಲು ಸಾಧ್ಯ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರಕಾರಕ್ಕೆ ಎರಡು ಪ್ರಶ್ನೆಯನ್ನು ಕೇಳಿದ ಚಿದಂಬರಂ, "ಸರಕಾರ ಜನರನ್ನು ಹಸಿವಿನಿಂದ ಏಕೆ ರಕ್ಷಿಸಲು ಮುಂದಾಗುತ್ತಿಲ್ಲ. ಪ್ರತಿ ಬಡ ಕುಟುಂಬಕ್ಕೆ ನಗದು ಹಣವನ್ನು ವರ್ಗಾಯಿಸುವ ಮೂಲಕ ಜನರ ಘನತೆಯನ್ನು ಏಕೆ ಕಾಪಾಡಿಕೊಳ್ಳುತ್ತಿಲ್ಲ? 77 ಮಿಲಿಯನ್ ಟನ್ ಧಾನ್ಯದಲ್ಲಿ ಸ್ವಲ್ಪ ಭಾಗವನ್ನು ಸರಕಾರವು ಎಫ್ಸಿಐ ಮೂಲಕ ಹಸಿವಿನಿಂದ ಕಂಗಾಲಾಗಿರುವ ಕುಟುಂಬಗಳಿಗೆ ಉಚಿತವಾಗಿ ಏಕೆ ವಿತರಿಸುತ್ತಿಲ್ಲ?ಎಂದು ಪ್ರಶ್ನಿಸಿದರು.
ಪಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರನ್ನು ಗುರಿ ಮಾಡಿದ ಚಿದಂಬರಂ, ನನ್ನ ಈ ಎರಡು ಪ್ರಶ್ನೆಗಳು ಆರ್ಥಿಕ ಹಾಗೂ ನೈತಿಕ ಪ್ರಶ್ನೆಯಾಗಿವೆ. ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ನನ್ನ ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆ. ದೇಶ ಅಸಹಾಯಕವಾಗಿ ನೋಡುತ್ತಿದೆ ಎಂದು ತನ್ನ ಮೂರನೇ ಟ್ವೀಟ್ನಲ್ಲಿ ಚಿದಂಬರಂ ಬರೆದಿದ್ದಾರೆ.





