ಕೊರೋನ ಸೋಂಕಿಗೆ ಮಹಿಳೆ ಬಲಿ : ಬಂಟ್ವಾಳ ಪೇಟೆ ಸೀಲ್ ಡೌನ್
► 5 ಕಿ.ಮೀ. ವ್ಯಾಪ್ತಿಯನ್ನು ಮೂರು ಝೋನ್ಗಳಾಗಿ ವಿಂಗಡನೆ ► ಮನೆಯಿಂದ ಹೊರ ಬಂದರೆ ಕೇಸ್ ದಾಖಲು

ಬಂಟ್ವಾಳ ಪೇಟೆ ಸಹಿತ ಸುತ್ತಲಿನ ಪ್ರದೇಶಗಳ ಎಲ್ಲಾ ರಸ್ತೆಗಳು ಬಂದ್
ಬಂಟ್ವಾಳ, ಎ.19: ಕೋವಿಡ್ - 19 (ಕೊರೋನ) ಸೋಂಕು ತಗುಲಿ ಬಂಟ್ವಾಳ ತಾಲೂಕಿನ ಮಹಿಳೆಯೊಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳೆಯ ಮನೆ ಇರುವ ಬಂಟ್ವಾಳ ಪೇಟೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ಬಿ.ಸಿ.ರೋಡ್ ವೃತ್ತದಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಬಂಟ್ವಾಳ ಪೇಟೆಯ ಮಧ್ಯೆ ಇರುವ ವೆಂಕಟರಮನ ದೇವಸ್ಥಾನದ ಬಳಿಯ ಕಾಮತ್ ಲೇನ್ನಲ್ಲಿ ಮೃತ ಮಹಿಳೆಯ ಮನೆ ಇದ್ದು ಇದರ ಸುತ್ತಮುತ್ತಲಿನ 5 ಕಿಲೋ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್, ಇನ್ನರ್ ಬಫರ್ ಝೋನ್, ಬಫರ್ ಝೋನ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಮೃತ ಮಹಿಳೆಯ ಮನೆಯ ಸುತ್ತಲಿನ 500 ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಈ ವಲಯ ಸಂಪೂರ್ಣ ಬಂದ್ (ಸೀಲ್ ಡೌನ್) ಆಗಿದೆ. ಮೃತ ಮಹಿಳೆಯ ಮನೆಯ ಸುತ್ತಲಿನ 1 ಕಿಲೋ ಮೀಟರ್ ವ್ಯಾಪ್ತಿಯನ್ನು ಇನ್ನರ್ ಬಫರ್ ಝೋನ್ ಎಂದು ಗುರುತಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಬರುವ ಪ್ರತೀ ಮನೆಗಳಿಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪ್ರತೀಯೊಬ್ಬರ ಆರೋಗ್ಯ ತಪಾಸನೆ ನಡೆಸಲಿದ್ದಾರೆ. ಅಲ್ಲದೆ ಈ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸಲಿದ್ದಾರೆ ಮತ್ತು ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಮೂರನೆಯದ್ದು ಬಫರ್ ಝೋನ್ ಆಗಿದ್ದು ಇದು ಮೃತ ಮಹಿಳೆ ಇದ್ದ ಮನೆಯ 5 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು ಈ ಪ್ರದೇಶಗಳಲ್ಲೂ ಕೊರೋನ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಸುರಕ್ಷಿತ ಅಂತರ ಸೇರಿದಂತೆ ವೈರಸ್ ಹರಡದಂತೆ ಇರುವ ಎಲ್ಲಾ ಆದೇಶಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದೆ.
ಸೀಲ್ ಡೌನ್ ಆಗಿರುವ ಬಂಟ್ವಾಳ ಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿದ್ದು ಯಾರಾದರೂ ಮನೆಯಿಂದ ಹೊರಬಂದರೆ ಅವರ ವಿರುದ್ಧ ಪ್ರಕರಣ ದಾಖಲಾಗುವುದು. ಹಾಗೆಯೇ ಈ ಪ್ರದೇಶಗಳ ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಬಗ್ಗೆ ಬಂಟ್ವಾಳ ತಾಲೂಕು ಆಡಳಿತ ಎಪ್ರಿಲ್ 20ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.
ಬಂಟ್ವಾಳ ಪೇಟೆಗೆ ಹೋಗುವ ಬಂಟ್ವಾಳ ಕೆಳಗಿನ ಪೇಟೆ ರಸ್ತೆ, ಜಕ್ರಿಬೆಟ್ಟು, ಬಡ್ಡಕಟ್ಟೆ ಸಹಿತ ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಸೀಲ್ ಮಾಡಲಾಗಿದೆ. ಈ ಪ್ರದೇಶಗಳಿಗೆ ಯಾರೂ ಬಾರದಂತೆ ಹಾಗೂ ಈ ಪ್ರದೇಶಗಳಿಂದ ಯಾರೂ ಹೊರ ಹೋಗದಂತೆ ಬ್ಯಾರಿಕೇಡ್ ಹಾಕಲಾಗಿದೆ.
ಈಗಾಗಲೇ ಆರೋಗ್ಯ ಇಲಾಖೆಯ ತಂಡ ಬಂಟ್ವಾಳ ಪೇಟೆಯಲ್ಲಿ ಸಂಚಾರ ಆರಂಭಿಸಿದ್ದು ಮೃತ ಮಹಿಳೆ ಇದ್ದ ಮನೆಯ ಬಳಿ ತಪಾಸಣಾ ಕಾರ್ಯ ಆರಂಭಿಸಿದೆ. ಮಹಿಳೆ ಇದ್ದ ಮನೆಯ ಸುತ್ತಮುತ್ತಲಿನ ಮನೆಗಳವರ ಆರೋಗ್ಯ ತಪಾಸನೆ ಸಹಿತ ಹಲವು ಕ್ರಮಗಳನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯ ಸಹಕಾರದಲ್ಲಿ ಕೈಗೊಳ್ಳಲಿದೆ.
ಬಂಟ್ವಾಳ ಪೇಟೆ ಸಹಿತ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳು, ಅಂಗಡಿ ಮುಂಗಟ್ಟುಗಳು ಇವೆ. ಈ ಎಲ್ಲಾ ಪ್ರದೇಶಗಳಿಗೂ ಪೊಲೀಸರು ತೆರಳಿ ಮನೆಯಿಂದ ಯಾರೂ ಹೊರ ಬಾರದಂತೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡಿದ್ದಾರೆ.
ವೈದ್ಯೆ ಕ್ವಾರಂಟೈನ್ಗೆ
ಮೃತ ಮಹಿಳೆಯನ್ನು ಸುಮಾರು ಬಾರಿ ತಪಾಸನೆ ನಡೆಸಿದ್ದ ಬಂಟ್ವಾಳದ ವೈದ್ಯರೊಬ್ಬರನ್ನು ರವಿವಾರ ಸಂಜೆ ಕ್ವಾರಂಟೈನ್ಗೆ ದಾಖಲಿಸಲಾಗಿದೆ. ಬಂಟ್ವಾಳದಲ್ಲಿ ಬಹುತೇಕ ಖಾಸಗಿ ಕ್ಲಿನಿಕ್ಗಳು ಮುಚ್ಚಿದ್ದರೂ ಈ ವೈದ್ಯೆ ಮಾತ್ರ ಕ್ಲಿನಿಕ್ ಮತ್ತು ಮನೆಯಲ್ಲೂ ಸೇವೆ ನೀಡುತ್ತಿದ್ದರು.
ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 14 ಸೋಂಕು ಪ್ರಕರಣಗಳು ಕಂಡು ಬಂದಿದ್ದರೂ 11 ಸೋಂಕಿತರು ಗುಣಮುಖರಾದ ಕಾರಣ ಜನರು ನಿರಾಳರಾಗಿದ್ದರು. ಆದರೆ ಜಿಲ್ಲೆಯಲ್ಲಿ ಮೊದಲ ಸಾವಿನ ಸುದ್ದಿಯ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ.
ಪತಿ, ಮಕ್ಕಳ ಸಹಿತ ಹಲವು ಮಂದಿ ಕ್ವಾರಂಟೈನ್ಗೆ
ಕೋವಿಡ್ - 19 ವೈರಸ್ ಸೋಂಕಿಗೆ ಬಲಿಯಾದ ಮಹಿಳೆಯ ಪತಿ, ಇಬ್ಬರು ಮಕ್ಕಳು ಸಹಿತ ಅವರನ್ನು ಸಂಪರ್ಕಿಸಿದ್ದ ಹಲವು ಮಂದಿಯನ್ನು ಕ್ವಾರಂಟೈನ್ಗೆ ದಾಖಲಿಸಲಾಗಿದೆ. ಮೃತ ಮಹಿಳೆಗೆ ಹಲವು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆ ಇತ್ತು ಎನ್ನಲಾಗಿದೆ. ಕೆಲವು ದಿನಗಳಿಂದ ಅವರು ಸ್ಥಳೀಯ ಕ್ಲಿನಿಕ್ ಒಂದರ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸ್ಥಳೀಯ ವೈದ್ಯೆ ಮೃತ ಮಹಿಳೆಗೆ ತಿಳಿಸಿದ್ದರು. ಆದರೆ ಮಹಿಳೆಯ ಪತಿ ಜ್ವಾಂಡಿಸ್ ರೋಗದಿಂದ ಬಳಲುತ್ತಿದ್ದರು. ಅಲ್ಲದೆ ಅತ್ತೆ (ಪತಿಯ ತಾಯಿ) ಪಕ್ಷವಾತದಿಂದ ಬಳಲುತ್ತಿದ್ದು ಅವರಿಗೆ ಮಂಗಳೂರು ಹೊರ ವಲಯದ ಅಡ್ಯಾರ್ ಕನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೃತ ಮಹಿಳೆಗೆ ಸ್ಥಳೀಯ ವೈದ್ಯೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವಂತೆ ತಿಳಿಸಿದ್ದರೂ ಹೋಗಿಲ್ಲ. ಶನಿವಾರ ಬೆಳಗ್ಗೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಹಿನ್ನೆಲೆಯಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ದುಬೈಯಿಂದ ಬಂದಿದ್ದ ಪುತ್ರ
ಕೋವಿಡ್ - 19 (ಕೊರೋನ) ವೈರಸ್ ಸೋಂಕಿಗೆ ಬಲಿಯಾದ ಬಂಟ್ವಾಳದ ಮಹಿಳೆಯ ಪುತ್ರ ದುಬೈಯಿಂದ ಬಂದಿದ್ದು ಪುತ್ರನಿಂದ ತಾಯಿಗೆ ಸೋಂಕು ತಗುಲಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಪುತ್ರನ ಆರೋಗ್ಯ ಸ್ಥಿರವಾಗಿದೆ. ಪುತ್ರ ಫೆಬ್ರವರಿ 16ರಂದು ದುಬೈಯಿಂದ ಬಂದ್ದಿದ್ದ ಎಂದು ಸ್ಥಳೀಯ ಕೆಲವರು ತಿಳಿಸಿದರೆ ಇನ್ನು ಕೆಲವರು ಮಾರ್ಚ್ 16ರಂದು ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ದೃಢೀಕರಿಸಲು ಸಂಬಂಧಿಕರನ್ನು ಸಂಪರ್ಕಿಸಿದರೂ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ.
ಆಂಬ್ಯುಲೆನ್ಸ್ ಸಹಾಯಕ ನಾಪತ್ತೆ !
ಕೊರೋನ ಶಂಕಿತ ರೋಗಿಗಳನ್ನು ಸಾಗಿಸಲೆಂದು ಸಿದ್ದಕಟ್ಟೆಯಲ್ಲಿರುವ 108 ಆಂಬ್ಯುಲೆನ್ಸ್ ಅನ್ನು ಸಜ್ಜುಗೊಳಿಸಲಾಗಿದೆ. ಆದರೆ ಕೊರೋನ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯನ್ನು ಶನಿವಾರ ಬೆಳಗ್ಗೆ ಬೇರೆ 108 ಆಂಬ್ಯುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಆಂಬ್ಯುಲೆನ್ಸ್ ಚಾಲಕ ಮತ್ತು ಸಹಾಯಕನಿಗೆ ಪಿಪಿಇ ಕಿಟ್ ಯಾವುದೇ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಇದರಿಂದ ಆಂಬ್ಯುಲೆನ್ಸ್ ಚಾಲಕ ಆತಂಕಕ್ಕೆ ಒಳಗಾಗಿದ್ದು ಈ ನಡುವೆ ಆಂಬ್ಯುಲೆನ್ಸ್ ಸಹಾಯಕ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ.







