ಲಾಕ್ ಡೌನ್: ಹಸಿವು ನೀಗಿಸಲು ಕಾಳಿಂಗ ಸರ್ಪವನ್ನು ಕೊಂದು ತಿಂದರು!
ಗುವಾಹಟಿ, ಎ.20: ದೇಶದೆಲ್ಲೆಡೆ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಮನೆಯಲ್ಲಿ ಅಡುಗೆಗೆ ಅಕ್ಕಿ-ಬೇಳೆ ಇಲ್ಲದ ಕಾರಣ ಹತಾಶರಾಗಿದ್ದ ಅರುಣಾಚಲ ಪ್ರದೇಶದ ಜನರ ಗುಂಪೊಂದು ಕಿಂಗ್ ಕೋಬ್ರಾವನ್ನು ಬೇಟೆಯಾಡಿ ತಿಂದಿರುವ ಘಟನೆ ಬೆಳಕಿಗೆ ಬಂದಿದೆ.
ಮೂವರ ಗುಂಪು 12 ಅಡಿ ಉದ್ದದ ಕಿಂಗ್ಕೋಬ್ರಾವನ್ನು ಕಾಡಿನಲ್ಲಿ ಬೇಟೆಯಾಡಿ ತಮ್ಮ ಹೆಗಲ ಮೇಲೆ ಹಾಕಿಕೊಂಡು ಬಂದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಿಂಗ್ಕೋಬ್ರಾವನ್ನ್ನು ಕಾಡಿನಲ್ಲಿ ಕೊಂದು ತಂದಿದ್ದೇವೆ ಎಂದು ಈ ಮೂವರು ಹೇಳಿರುವುದು ವೀಡಿಯೊದಲ್ಲಿದೆ.
ಕಿಂಗ್ಕೋಬ್ರಾದ ಮಾಂಸದೂಟಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ ಇವರು ಬಾಳೆ ಎಲೆಯನ್ನು ಹಾಸಿ, ಹಾವಿನ ಮಾಂಸವನ್ನು ತುಂಡು ಮಾಡಿ ತೊಳೆದಿದ್ದರು.
ಕೋವಿಡ್-19 ವೈರಸ್ನಿಂದಾಗಿ ಮನೆಯಲ್ಲಿ ದಿನಸಿ ಖಾಲಿಯಾಗಿತ್ತು. ಅಕ್ಕಿ ಕೂಡ ಇರಲಿಲ್ಲ. ಹೀಗಾಗಿ ನಾವು ಕಾಡಿಗೆ ಹೋಗಿ ಏನಾದರೂ ಸಿಗಬಹುದೇ ಎಂದು ಹುಡುಕಾಡುತ್ತಿದ್ದೆವು. ಆಗ ಇದು(ಕಿಂಗ್ ಕೋಬ್ರಾ)ಸಿಕ್ಕಿತು ಎಂದು ಓರ್ವ ವ್ಯಕ್ತಿ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೂವರು ಕೈಗೆ ಸಿಗದೆ ಓಡಿಹೋಗಿದ್ದಾರೆ. ಕಾನೂನಿನ ಪ್ರಕಾರ ಕಿಂಗ್ ಕೋಬ್ರಾ ಸಂರಕ್ಷಣಾ ಸರೀಸೃಪವಾಗಿದೆ. ಇದನ್ನು ಕೊಲ್ಲುವುದು ಮಹಾ ಅಪರಾಧ. ಕೊಂದವರಿಗೆ ಜಾಮೀನು ಸಿಗುವುದಿಲ್ಲ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶವು ಹೆಚ್ಚಿನ ಸಂಖ್ಯೆಯ ಅಳಿವಿನಂಚಿನಲ್ಲಿರುವ ಹಾವು ಪ್ರಭೇದಗಳಿಗೆ ನೆಲೆಯಾಗಿದೆ.