ಕೊರೋನ್ವೈರಸ್ ಲಾಕ್ಡೌನ್ ನಿಯಮಗಳನ್ನು ದುರ್ಬಲಗೊಳಿಸಬೇಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ಕೇರಳದ ಕ್ರಮಕ್ಕೆ ಗೃಹ ಸಚಿವಾಲಯದಿಂದ ತೀವ್ರ ಆಕ್ಷೇಪ

ಹೊಸದಿಲ್ಲಿ,ಎ.20: ಕೊರೋನವೈರಸ್ ಹರಡುವುದನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯ ಕುರಿತು ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ದುರ್ಬಲಗೊಳಿಸಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ರಾಜ್ಯಗಳು ತಮ್ಮದೇ ಆದ ಚಟುವಟಿಕೆಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸ್ಪಷ್ಟಪಡಿಸಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿರುವ ಕೇಂದ್ರ ಗೃಹ ಸಚಿವಾಲಯ, ಕೇಂದ್ರ ಸರಕಾರ ತನ್ನ ಮಾರ್ಗಸೂಚಿಯಲ್ಲಿ ಅನುಮತಿಸಿರುವ ಚಟುವಟಿಕೆಗಳಿಗೆ ಮಾತ್ರ ಅವಕಾಶವಿದೆ. ಕೊರೋನವೈರಸ್ನಿಂದ ಕಡಿಮೆ ಬಾಧಿತವಾಗಿರುವ ದೇಶದ ಕೆಲವು ಭಾಗಗಳಲ್ಲಿ ಇಂದಿನಿಂದ ಕೆಲವು ವಲಯಗಳು ಭಾಗಶಃ ತೆರೆಯಲಿವೆ ಎಂದು ಹೇಳಿದೆ.
ಕೆಲವು ರಾಜ್ಯಗಳು ತಮ್ಮದೆ ಅಗತ್ಯವಿರುವ ಚಟುವಟಿಕೆಯ ಪಟ್ಟಿಯನ್ನು ರಚಿಸಿ ಕೋವಿಡ್-19ರ ನಿರ್ಬಂಧವನ್ನು ಸೋಮವಾರದಿಂದ ಸಡಿಸುವಂತೆ ಕೇಂದ್ರ ಸರಕಾರವನ್ನು ಕೋರಿದ್ದವು. ಇದಕ್ಕೆಲ್ಲಾ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ಸರಕಾರ ಕಳೆದ ತಿಂಗಳು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದೆ.
ಕೇರಳಕ್ಕೆ ಪ್ರತ್ಯೇಕ ಪತ್ರವನ್ನು ಬರೆದಿರುವ ಕೇಂದ್ರ ಗೃಹ ಸಚಿವಾಲಯ ಇಂದಿನಿಂದ ರಾಜ್ಯದ ಕೆಲವು ಭಾಗಗಳಲ್ಲಿ ರೆಸ್ಟೋರೆಂಟ್ಗಳು,ಬುಕ್ ಶಾಪ್ಗಳು ಹಾಗೂ ಕ್ಷೌರಿಕ ಅಂಗಡಿಗಳನ್ನು ತೆರೆಯುವ ಕೇರಳದ ಸರಕಾರದ ಹೆಜ್ಜೆಯನ್ನು ತೀವ್ರವಾಗಿ ಆಕ್ಷೇಪಿಸಿದೆ.
ಕೇರಳ ಸೋಮವಾರದಿಂದ ಎರಡು ವಲಯಗಳಲ್ಲಿ ಲಾಕ್ಡೌನ್ ನಿರ್ಬಂಧವನ್ನು ಸಡಿಸುವುದಾಗಿ ಘೋಷಿಸಿತ್ತು.ಸಮ-ಬೆಸ ಆಧಾರದಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಹಾಗೂ ಸಂಜೆ 7ರ ತನಕ ಹೊಟೇಲ್ನ್ನು ತೆರೆಯಲು ಅನುಮತಿ ನೀಡಿತ್ತು.







