ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ: ಆದಿತ್ಯನಾಥ್
ಹೊಸದಿಲ್ಲಿ, ಎ.20:ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕಿಡ್ನಿ ಸಮಸ್ಯೆಯಿಂದ ಮೃತಪಟ್ಟಿರುವ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಇಂದು ಬೆಳಗ್ಗೆ 10:44ಕ್ಕೆ ಗೌರವಾನ್ವಿತ ಮುಖ್ಯಮಂತ್ರಿಗಳ ತಂದೆ ಆನಂದ ಸಿಂಗ್ ಬಿಶ್ತ್ ಮೃತಪಟ್ಟಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ ಎಂದು ಉತ್ತರಪ್ರದೇಶ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.
ಆದಿತ್ಯನಾಥ್ ಅವರ ತಂದೆಯ ಪಾರ್ಥಿವ ಶರೀರವನ್ನು ಉತ್ತರಾಖಂಡದ ಪೌರಿ ಜಿಲ್ಲೆಯ ಹಳ್ಳಿಗೆ ಕೊಂಡೊಯ್ಯಲಾಗುತ್ತದೆ. ಕೋವಿಡ್-19 ಬಿಕ್ಕಟ್ಟಿನ ಬಗ್ಗೆ ಸಭೆ ನಡೆಸುತ್ತಿದ್ದಾಗ ಆದಿತ್ಯನಾಥ್ಗೆ ಅವರ ತಂದೆಯ ಸಾವಿನ ಸುದ್ದಿ ಲಭಿಸಿತ್ತು.
ಕೊರೋನ ವೈರಸ್ ಹರಡುವುದನ್ನು ಹತೋಟಿಗೆ ತರಲು ಹೇರಲಾಗಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ನಾಳೆ ನನಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಅಂತಿಮ ಕ್ಷಣದಲ್ಲಿ ಅವರ ಜೊತೆಗಿರಲು ಬಯಸಿದ್ದೆ. ಉತ್ತರಪ್ರದೇಶದ 23 ಕೋಟಿ ಜನರ ರಕ್ಷಣೆಯ ಹೊಣೆ ಇರುವ ಕಾರಣ ಇದು ಸಾಧ್ಯವಾಗಿಲ್ಲ. ನನ್ನ ಕುಟುಂಬ ಸದಸ್ಯರಿಗೆ ಲಾಕ್ಡೌನ್ ನಿಯಮ ಪಾಲಿಸುವಂತೆ ಕೋರುತ್ತೇನೆ . ಲಾಕ್ಡೌನ್ ಬಳಿಕ ಅಲ್ಲಿಗೆ ಭೇಟಿ ನೀಡುವೆ ಎಂದರು.