ಸಾಲ ಪಡೆದು ಸಂಕಷ್ಟದಲ್ಲಿದ್ದವರಿಗೆ ನೆರವಾಗುತ್ತೇನೆ: ಪ್ರಕಾಶ್ ರಾಜ್
ಕೊರೋನ ಬಿಕ್ಕಟ್ಟು
ಬೆಂಗಳೂರು: ದೇಶವ್ಯಾಪಿ ಲಾಕ್ಡೌನ್ ಘೋಷಣೆಯಾದ ನಂತರ ನಟ, ರಾಜಕಾರಣಿ ಪ್ರಕಾಶ್ ರಾಜ್ ಸಂಕಷ್ಟದಲ್ಲಿರುವವರಿಗೆ ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜೀವನಾಧಾರ ಕಳೆದುಕೊಂಡಿರುವ ದಿನಗೂಲಿಗಳಿಗೆ ನೆರವು ನೀಡುತ್ತಿದ್ದಾರೆ.
“ಹಣಕಾಸು ಸಂಪನ್ಮೂಲ ಬರಿದಾಗುತ್ತಿದೆ. ಆದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಸಾಲ ತೆಗೆದಾದರೂ ತೊಂದರೆಯಲ್ಲಿರುವವರಿಗೆ ನೆರವಾಗುತ್ತೇನೆ” ಎಂದು ಇತ್ತೀಚಿನ ಟ್ವೀಟ್ ನಲ್ಲಿ ಪ್ರಕಾಶ್ ರಾಜ್ ಹೇಳಿದ್ದಾರೆ.
“ನನ್ನ ಹಣಕಾಸು ಸಂಪನ್ಮೂಲ ಕ್ಷೀಣಿಸುತ್ತಿದೆ. ಆದರೆ ಜನರಿಗೆ ನೆರವು ನೀಡಲು ಸಾಲವನ್ನಾದರೂ ಪಡೆಯುತ್ತೇನೆ. ಏಕೆಂದರೆ ನಾನು ಮತ್ತೆ ಗಳಿಸಬಹುದು ಎಂಬ ವಿಶ್ವಾಸ ನನಗಿದೆ. ಮಾನವೀಯತೆ ಈ ಕಷ್ಟದ ಸಂದರ್ಭದಲ್ಲಿ ಉಳಿದುಕೊಂಡರೆ..ನಾವು ಜತೆಯಾಗಿ ಹೋರಾಡಬಹುದು.. ಜೀವಕ್ಕಾಗಿ ಒಂದಷ್ಟು ನೀಡೋಣ..ಪ್ರಕಾಶ್ ರಾಜ್ ಫೌಂಡೇಷನ್ ನ ಉಪಕ್ರಮ..” ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ರಾಜ್ ತಮ್ಮ ಫೌಂಡೇಷನ್ ಮೂಲಕ 1000ಕ್ಕೂ ಹೆಚ್ಚು ಕುಟುಂಬಗಳಿಗೆ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮನೆ, ತೋಟ ಹಾಗೂ ನಿರ್ಮಾಣಗೃಹದ ಉದ್ಯೋಗಿಗಳಿಗೆ ಈಗಾಗಲೇ ಮೂರು ತಿಂಗಳ ಮುಂಗಡ ವೇತನ ಪಾವತಿಸಿದ್ದಾರೆ.