ದಿಲ್ಲಿ ಹಿಂಸಾಚಾರದ ತನಿಖೆ ನಿಷ್ಪಕ್ಷಪಾತವಾಗಿದೆ: ಪೊಲೀಸರು
ಹೊಸದಿಲ್ಲಿ, ಎ.20: ಕಳೆದ ಡಿಸೆಂಬರ್ನಲ್ಲಿ ಜಾಮಿಯಾ ಮಿಲ್ಲಿಯಾ ವಿವಿ ಮತ್ತು ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರವನ್ನು ತಾವು ನಿರ್ವಹಿಸಿದ್ದ ರೀತಿಯ ಬಗ್ಗೆ ಟೀಕೆಗಳನ್ನು ಸೋಮವಾರ ತಳ್ಳಿಹಾಕಿರುವ ದಿಲ್ಲಿ ಪೊಲೀಸರು, ತಮ್ಮ ತನಿಖೆಯು ಪಕ್ಷಪಾತರಹಿತವಾಗಿದೆ ಎಂದು ಹೇಳಿದ್ದಾರೆ.
‘ಜಾಮಿಯಾ ಮಿಲ್ಲಿಯಾ ಮತ್ತು ಈಶಾನ್ಯ ದಿಲ್ಲಿ ಹಿಂಸಾಚಾರಗಳ ತನಿಖೆಯನ್ನು ದಿಲ್ಲಿ ಪೊಲೀಸ್ ಇಲಾಖೆಯು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸಿದೆ. ವೀಡಿಯೊ ಫೂಟೇಜ್,ತಾಂತ್ರಿಕ ಮತ್ತು ಇತರ ಸುಳಿವುಗಳು ಸೇರಿದಂತೆ ವೈಜ್ಞಾನಿಕ ಮತ್ತು ವಿಧಿವಿಜ್ಞಾನ ಸಾಕ್ಷಾಧಾರಗಳ ವಿಶ್ಲೇಷಣೆಯ ಆಧಾರದಲ್ಲಿ ಎಲ್ಲ ಬಂಧನಗಳು ನಡೆದಿವೆ. ಪೊಲೀಸರು ವದಂತಿಗಳು ಮತ್ತು ಸುಳ್ಳು ಪ್ರಚಾರಗಳಿಗೆ ಮಣಿಯುವುದಿಲ್ಲ’ ಎಂದು ದಿಲ್ಲಿ ಪೊಲೀಸ್ ಟ್ವೀಟಿಸಿದೆ.
ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಿಎಎ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಹಿಂಸಾಚಾರ ಸ್ಫೋಟಿಸಿ, 54 ಜನರು ಮೃತಪಟ್ಟಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಈ ಹಿಂಸಾಚಾರದ ಸಂದರ್ಭದಲ್ಲಿ ದಿಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದರು ಅಥವಾ ಒಂದು ಗುಂಪಿನೊಂದಿಗೆ ಶಾಮೀಲಾಗಿದ್ದರು ಎಂದು ಟೀಕಾಕಾರರು ಆರೋಪಿಸಿದ್ದಾರೆ. ಮುಸ್ಲಿಮರತ್ತ ಕಲ್ಲುತೂರಾಟ ನಡೆಸಲು ದಿಲ್ಲಿ ಪೊಲೀಸರು ತಮಗೆ ನೆರವಾಗಿದ್ದರು ಎಂದು ಬಿಬಿಸಿಯು ಬಿಡುಗಡೆಗೊಳಿಸಿದ ವೀಡಿಯೊ ಸಾಕ್ಷದಲ್ಲಿ ಸಂಘಪರಿವಾರ ಸದಸ್ಯರು ಸಹ ಒಪ್ಪಿಕೊಂಡಿದ್ದರು.
ಡಿ.15ರಂದು ಜಾಮಿಯಾ ಮಿಲ್ಲಿಯಾ ವಿವಿ ಬಳಿ ಸಿಎಎ ಅನ್ನು ವಿರೋಧಿಸಿ ವಿದ್ಯಾರ್ಥಿಗಳ ಜಾಥಾದ ಸಂದರ್ಭ ಪೊಲೀಸರೊಂದಿಗೆ ಘರ್ಷಣೆಗಳು ನಡೆದಿದ್ದು, ಹಲವಾರು ವಿದ್ಯಾರ್ಥಿಗಳು ಮತ್ತು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರತಿಭಟನೆಯನ್ನು ದಮನಿಸಲು ಪೊಲಿಸರು ಅತಿಯಾದ ಬಲವನ್ನು ಬಳಸಿದ್ದರು ಮತ್ತು ವಿವಿ ಕ್ಯಾಂಪಸ್ಗೆ ನುಗ್ಗಿದ್ದರು ಎಂದು ಆರೋಪಿಸಲಾಗಿತ್ತು. ಪ್ರತಿಭಟನಾಕಾರರು ತಮ್ಮ ಸಿಬ್ಬಂದಿಗಳನ್ನು ಗಾಯಗೊಳಿಸಿದ್ದರು ಮತ್ತು ಬಸ್ಸುಗಳಿಗೆ ಬೆಂಕಿ ಹಚ್ಚಿದ್ದರು, ಹೀಗಾಗಿ ತಮ್ಮ ಕ್ರಮ ಸಮರ್ಥನೀಯವಾಗಿತ್ತು ಎಂದು ಪೊಲೀಸರು ಹೇಳಿಕೊಂಡಿದ್ದರು.