ಪಾದರಾಯಣಪುರ ಘಟನೆ ಖಂಡನೀಯ: ಎಸ್ಕೆಎಸ್ಸೆಸ್ಸೆಫ್
ಬೆಂಗಳೂರು: ಪಾದರಾಯಣಪುರದಲ್ಲಿ ಕೋರೋನಾ ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಕಾರಂಟೈನ್ ಮಾಡಲು ಮುಂದಾಗಿದ್ದ ಬಿಬಿಎಂಪಿ, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆಯನ್ನು ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಪ್ರಕರಣದಲ್ಲಿ ಭಾಗಿಯಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತದೆ.
ಜಗತ್ತಿನಾದ್ಯಂತ ಮಾರಕವಾಗಿ ಕಾಡುತ್ತಿದ್ದ ಕೊರೋನಾ ವೈರಸನ್ನು ತಡೆಗಟ್ಟಲು ದೇಶದ ಜನರು ಒಗ್ಗಟ್ಟಿನಿಂದ ಹೋರಾಡುತ್ತಿರುವಾಗ ಸಮಾಜ ಸ್ವಾಸ್ಥ್ಯ ಕದಡುವಂತಹ ಇಂತಹ ಕೃತ್ಯಗಳು ನಡೆದಿರುವುದು ದುರಂತವಾಗಿದೆ. ಇದು ಮರುಕಳಿಸದಂತೆ ಎಚ್ಚರವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಬಗ್ಗೆ ಸರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರಗಿಸಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್ ಕಿನ್ಯಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





