ಉಡುಪಿ : ಮಂಗಳವಾರ ಇನ್ನೂ 76 ಮಂದಿಯ ಕೊರೋನ ವೈರಸ್ ಸ್ಯಾಂಪಲ್ ಸಂಗ್ರಹ
ಉಡುಪಿ, ಎ.21: ನೋವೆವ್ ಕೊರೋನ ವೈರಸ್ (ಕೋವಿಡ್-19)ನ ಗುಣಲಕ್ಷಣಗಳೊಂದಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಇನ್ನೂ 76 ಮಂದಿಯ ಗಂಟಲು ದ್ರವ ಮಾದರಿಯನ್ನು ಮಂಗಳವಾರ ಸಂಗ್ರಹಿಸಿ ಪರೀಕ್ಷೆಗಾಗಿ ಮಂಗಳೂರಿನಲ್ಲಿರುವ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಮಂಗಳೂರಿಗೆ ಕಳುಹಿಸಿದ 76 ಗಂಟಲು ದ್ರವ ಸ್ಯಾಂಪಲ್ಗಳಲ್ಲಿ 61 ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರದ್ದಾದರೆ, ಎಂಟು ತೀವ್ರ ಉಸಿರಾಟದ ತೊಂದರೆಯಿಂದ ಬಾಧಿತರಾದವರದ್ದು. ಶೀತಜ್ವರದಿಂದ ಬಳಲು ತ್ತಿರುವ ಐವರ ಸ್ಯಾಂಪಲ್ಗಳೊಂದಿಗೆ ವಿವಿಧ ಕೊರೋನ ಹಾಟ್ಸ್ಪಾಟ್ಗಳಿಂದ ಮರಳಿದ ಇಬ್ಬರ ಸ್ಯಾಂಪಲ್ಗಳನ್ನು ಕೊರೋನ ಸೋಂಕಿನ ಪರೀಕ್ಷೆಗೆ ಕುಹಿಸಲಾಗಿದೆ ಎಂದವರು ತಿಳಿಸಿದರು.
ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಿಂದ ಬಾಕಿ ಇದ್ದ ಒಟ್ಟು 24 ಗಂಟಲು ದ್ರವದ ಸ್ಯಾಂಪಲ್ಗಳಲ್ಲಿ ಇಂದು ಕೇವಲ ಇಬ್ಬರ ವರದಿ ನೆಗೆಟಿವ್ ಆಗಿ ಬಂದಿವೆ. ಹೀಗಾಗಿ ಮಂಗಳವಾರ ಪರೀಕ್ಷೆಗೆ ಕಳುಹಿಸಿದ 76 ಸ್ಯಾಂಪಲ್ಗಳು ಸೇರಿದಂತೆ ಇನ್ನು ಒಟ್ಟು 98ರ ವರದಿ ಬರಬೇಕಾಗಿದೆ ಎಂದರು.
ಇಂದು 16 ಮಂದಿ ಕೋವಿಡ್-19 ರೋಗಲಕ್ಷಣದೊಂದಿಗೆ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಆರು ಮಂದಿ ಪುರುಷರು ಹಾಗೂ ಹತ್ತು ಮಹಿಳೆಯಾಗಿದ್ದಾರೆ. ನಾಲ್ಕು ಮಂದಿ ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ, 10 ಮಂದಿ ತೀವ್ರ ಉಸಿರಾಟದ ತೊಂದರೆ ಗಾಗಿ ಬಂದಿದ್ದಾರೆ. ಇಬ್ಬರು ಶೀತಜ್ವರ ಬಾಧೆಗೆ ದಾಖಲಾಗಿದ್ದಾರೆ. ಇಂದು 4 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆಯಾಗಿ 250 ಮಂದಿ ಈವರೆಗೆ ಬಿಡುಗಡೆಗೊಂಡಿದ್ದಾರೆ. ಈಗ 45 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ ಎಂದು ಡಿಎಚ್ಓ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 980 ಮಂದಿಯ ಸ್ಯಾಂಪಲ್ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 879 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ. ಪಾಸಿಟಿವ್ ಬಂದ ಮೂವರೂ ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.
ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಇಂದು ಮತ್ತೆ 94 ಮಂದಿ ಹೊಸದಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3022 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1863 (ಇಂದು 22) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2260 (53) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 682 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 36 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬಾರದ ಎರಡನೇ ವರದಿ
ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನೊಂದಿಗೆ ತೀವ್ರ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ 26ರ ಹರೆಯದ ಗರ್ಭಿಣಿ ಮಹಿಳೆಯ ಎರಡನೇ ಸ್ಯಾಂಪಲ್ ವರದಿ ಇಂದು ಬಂದಿಲ್ಲ ಎಂದು ಡಾ.ಸೂಡ ತಿಳಿಸಿದ್ದಾರೆ. ಅವರ ಮೊದಲ ಸ್ಯಾಂಪಲ್ ವರದಿ ನಿನ್ನೆ ನೆಗೆಟಿವ್ ಆಗಿ ಬಂದಿತ್ತು.
ಎರಡನೇ ಸ್ಯಾಂಪಲ್ನ ವರದಿ ಇಂದು ತಡರಾತ್ರಿ ಅಥವಾ ನಾಳೆ ಕೈಸೇರುವ ನಿರೀಕ್ಷೆ ಇದೆ. ಅದೂ ನೆಗೆಟಿವ್ ಆಗಿ ಬಂದರೆ, ಅವರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಿ ಬಿಡುಗಡೆ ಕುರಿತು ನಿರ್ಧರಿಸಲಾಗುವುದು ಎಂದೂ ಅವರು ಹೇಳಿದರು. ಈ ಮಹಿಳೆಯ ಪತಿ ಸಹ ಕೊರೋನ ಸೋಂಕಿಗೆ ತುತ್ತಾಗಿ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ತಿಳಿದುಬಂದಿದೆ.







