ಮುಂದಿನ ಅನಾಹುತಗಳಿಗೆ ರಾಜ್ಯ ಸರಕಾರವೇ ಹೊಣೆ: ಕುಮಾರಸ್ವಾಮಿ ಎಚ್ಚರಿಕೆ
ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್

ಬೆಂಗಳೂರು, ಎ. 21: ನಗರದ ಪಾದರಾಯನಪುರ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಕೊರೋನ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ರಾಮನಗರ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. ಚೋದ್ಯವೆಂದರೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ ಕೈದಿಗಳನ್ನು ಸ್ಥಳಾಂತರಿಸಿ, ಪಾದರಾಯನಪುರ ಪುಂಡರನ್ನು ರಾಮನಗರ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿ 15ಕ್ಕೂ ಹೆಚ್ಚು ಮಂದಿಯನ್ನು ಇರಿಸುವ ಮೂಲಕ ಕೊರೋನ ಭೀತಿ ಎದುರಾಗಿದೆ.
ಇದರಿಂದ ಜಿಲ್ಲೆಯ ಜನತೆ ಭಯಗೊಂಡಿದ್ದಾರೆ. ರಾಜ್ಯ ಸರಕಾರ ತಕ್ಷಣವೇ ತನ್ನ ನಿರ್ಧಾರವನ್ನು ಬದಲಿಸಬೇಕು. ಸೋಮವಾರ ಸೆರೆ ಸಿಕ್ಕ 54 ಮಂದಿ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಬದಲಿಗೆ ರಾಮನಗರ ಕಾರಾಗೃಹದಲ್ಲಿರಿಸುವ ನಿರ್ಧಾರ ಕೈಗೊಂಡವರು ಯಾರು? ನನಗಿರುವ ಮಾಹಿತಿ ಪ್ರಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್. ಇದು ದುಡುಕು ನಿರ್ಧಾರ. ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಎರಡೆರಡು ಬಾರಿ ದೂರವಾಣಿಯಲ್ಲಿ ಚರ್ಚಿಸಿದ್ದೇನೆ. ರಾಮನಗರ ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ಇಳಿಯದಂತೆ ಮನವೊಲಿಸಿದ್ದೇನೆ. ಇದನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾದರಾಯನಪುರ ಗಲಾಟೆಗೆ ಸಂಬಂಧಪಟ್ಟಂತೆ ಒಟ್ಟು ಈವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಎಲ್ಲರನ್ನು ಬೆಂಗಳೂರಿನ ಯಾವುದಾದರೂ ಸರಕಾರಿ ಆಸ್ಪತ್ರೆಯಲ್ಲಿ ಅಥವಾ ಹಾಸ್ಟೆಲ್ ಕಟ್ಟಡದಲ್ಲಿ ಸೂಕ್ತ ಬಂದೋಬಸ್ತ್ ನೊಂದಿಗೆ ಇಡುವುದು ಸೂಕ್ತ. ರಾಜ್ಯ ಸರಕಾರ ಇಂತಹ ಸೂಕ್ಷ್ಮ ವಿಚಾರದಲ್ಲಿ ಜನತೆಯೊಂದಿಗೆ ಚೆಲ್ಲಾಟವಾಡದೆ ತಕ್ಷಣವೇ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಅಡುಗೆಯವರು ಮತ್ತು ಶುಚಿತ್ವದ ಸಿಬ್ಬಂದಿ ವಾಸಿಸುತ್ತಿದ್ದು, ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಗಲಭೆಕೋರರಿಂದ ಅಕಸ್ಮಾತ್ ಕೊರೋನ ಸೋಂಕು ತಗುಲಿದರೆ ಜಿಲ್ಲೆ ಸ್ವಾಸ್ಥ್ಯ ಹೆದಗೆಡುತ್ತದೆ ಎಂಬ ಕನಿಷ್ಟ ಪ್ರಜ್ಞೆ ಸರಕಾರಕ್ಕೆ ಬೇಡವೇ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.







