ಪಾದರಾಯನಪುರ: 6ನೆ ಎಫ್ಐಆರ್ ದಾಖಲು
ಬೆಂಗಳೂರು, ಎ.21: ಪಾದರಾಯನಪುರ ಗಲಾಟೆ ಆರೋಪ ಪ್ರಕರಣ ಸಂಬಂಧ 6ನೆ ಎಫ್ಐಆರ್ ದಾಖಲು ಮಾಡಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.
ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಸಹಜ ಸ್ಥಿತಿಗೆ ಮರಳುತ್ತಿದ್ದು, ಘಟನೆ ಸಂಬಂಧ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನು, ಈಗಾಗಲೇ ಆರೋಪಿಗಳ ಮೇಲೆ ಐದು ಎಫ್ಐಆರ್ ದಾಖಲಿಸಿದ್ದು, 6ನೇ ಎಫ್ಐಆರ್ ಸಹ ದಾಖಲಿಸುತ್ತೇವೆ ಎಂದರು.
36 ಸಾವಿರ ವಾಹನ ಜಪ್ತಿ: ಲಾಕ್ಡೌನ್ ಉಲ್ಲಂಘಿಸಿ ಸಂಚಾರ ನಡೆಸಿದ ಆರೋಪದಡಿ 36 ಸಾವಿರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ, ನಗರದ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ್ಲ ಪ್ರದೇಶಗಳಲ್ಲೂ ಪರಿಶೀಲನೆ ನಡೆಯುತ್ತಿದೆ. ಅನಗತ್ಯವಾಗಿ ಓಡಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮೇ 3ರವರೆಗೂ ನಿಷೇಧಾಜ್ಞೆ
ಲಾಕ್ಡೌನ್ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕಣ್ಗಾವಲು ಹೆಚ್ಚಾಗಿದೆ. ಈ ಹಿಂದೆ ಎಪ್ರಿಲ್ 20 ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಆದರೆ, ಇಂದಿನಿಂದ ಮೇ 3ರವರೆಗೂ ನಗರದಾದ್ಯಂತ ಮತ್ತೆ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ನಗರ ಪೊಲೀಸ್ ಆಯುಕ್ತ ಆದೇಶ ಹೊರಡಿಸಿದ್ದಾರೆ.





