ಭಾಷಣ ಸಾಕು-ವೇತನ ಬೇಕು ಮನೆಯಿಂದಲೇ ಚಳವಳಿ ಆರಂಭ
ಕಲಬುರಗಿ, ಎ.21: ಕೇಂದ್ರ ಸರಕಾರದ ನಿರ್ಲಕ್ಷ್ಯದಿಂದಾಗಿಯೇ ಕೊರೋನ ಸೋಂಕು ದೇಶವ್ಯಾಪಿ ಹರಡಿ, ಹಲವು ರೀತಿಯ ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಂತರೈತ ಸಂಘ ಹಾಗೂ ಸಿಐಟಿಯು ಆರೋಪಿಸಿದೆ.
ಸಿಐಟಿಯು-ಕನಾಟಕ ಪ್ರಾಂತರೈತ ಸಂಘ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಭಾಷಣ ಸಾಕು-ವೇತನ ಬೇಕು, ಉದ್ಯೋಗ ಉಳಿಸಿ-ಆರ್ಥಿಕತೆ ರಕ್ಷಿಸಿ ಹಾಗೂ ಆಹಾರ ಒದಗಿಸಿ-ಬದುಕು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಮನೆಯಿಂದಲೇ ಚಳವಳಿ ಆರಂಭಿಸಿದ್ದು, ಸಂಘಟನೆಯ ಮುಖಂಡರು, ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಮೂಲಭೂತ ಅಗತ್ಯಗಳ ಸುಧಾರಣೆಗಾಗಿ ಹಕ್ಕೊತ್ತಾಯ ಮಾಡುತ್ತಿದ್ದಾರೆ.
ದೇಶದಲ್ಲಿ ಕೊರೋನ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಕೇರಳ ಸರಕಾರ ಜನವರಿಯಿಂದಲೇ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬಂದವರಿಗೆ ಉಷ್ಣಾಂಶ ತಪಾಸಣೆ ಮತ್ತು ಕೋವಿಡ್-19ರ ಲಕ್ಷಣಗಳ ತಪಾಸಣೆ ನಡೆಸಿ ಶಂಕಿತರನ್ನು ಪತ್ಯೇಕ ವಾಸ ಮಾಡುವಂತೆ ಆದೇಶಿಸಲಾಯಿತು. ಆದರೆ, ಇದೇ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿ ಚುನಾವಣೆ, ನಮಸ್ತೆ ಟ್ರಂಪ್ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮಗ್ನರಾಗಿದ್ದರು. ಇದರಿಂದಾಗಿಯೇ ಕೋವಿಡ್-19 ಮಹಾಮಾರಿ ದೇಶವ್ಯಾಪಿ ಹರಡಿತು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಪ್ರಾಂತರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.
ಕೇರಳ ಮಾದರಿಯಾಗಲಿ: ಕೇರಳ ಸರಕಾರವು ಎಂಬತ್ತೇಳು ಲಕ್ಷ ಕುಟುಂಬಗಳಿಗೆ ದಿನ ಬಳಕೆಯ ದಿನಸಿಗಳನ್ನು 4ಕೆಜಿ ಬೇಳೆ, 40ಕೆಜಿ ಅಕ್ಕಿ, ಜಿರಿಗೆ, ಸಾಸವೆ, ಹಲ್ಲುಜ್ಜುವ ಪೇಸ್ಟ್, ಬ್ರೆಷ್ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಗಳು ಸೇರಿ ಮನೆ ಮನೆಗೆ ನೀಡಿ ಜನತೆಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕವನ್ನು ಒಳಗೊಂಡಂತೆ ದೇಶದ ಇತರೆ ರಾಜ್ಯಗಳಲ್ಲಿ ಮೂಲಭೂತ ಅಗತ್ಯಗಳನ್ನು ಮನೆ ಮನೆಗೆ ಕಳುಹಿಸುವಂತಹ ಕೆಲಸವಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯಗಳು:
-ಕೆಲಸದ ಅವಧಿಯನ್ನು ಯಾವುದೇ ಸ್ವರೂಪದಲ್ಲಿ 8ರಿಂದ 12ಗಂಟೆಗೆ ಹೆಚ್ಚಿಸಬಾರದು.
-ಕೂಡಲೇ ವಲಸೆ ಕಾರ್ಮಿಕರಿಗೆ ಒಳ್ಳೆಯ ವಸತಿ ಮತ್ತು ಆಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು.
-ಕೊರೋನ ತಡೆಗಟ್ಟಲು ಮುಂದಾಳುಗಳಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಮತ್ತು ಅಗತ್ಯ ಸೇವಾ ಕಾರ್ಯಕರ್ತರಿಗೆ ಕೂಡಲೇ ರಕ್ಷಣಾ ಪರಿಕರಗಳನ್ನು ಒದಗಿಸಬೇಕು. ಹಾಗೂ ಅವರ ವೇತನದ ಒಂದು ಪಟ್ಟು ಹೆಚ್ಚು ನೀಡಬೇಕು.
-ಗುತ್ತಿಗೆ, ಹೊರಗುತ್ತಿಗೆಗೆ ದುಡಿಯುತ್ತಿರುವ ಕಾರ್ಮಿಕ ಮತ್ತು ನೌಕರರನ್ನು ಕೆಲಸದಿಂದ ತೆಗೆಯಬಾರದು.
-ಎಲ್ಲ ವರ್ಗದ ಕಾರ್ಮಿಕರ ವೇತನ ಖಾತರಿ ಪಡಿಸಬೇಕು.
-ವೇತನ ಕಡಿತ ಮಾಡುವ ಕಂಪೆನಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು.
-ಆದಾಯರಹಿತ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ತಿಂಗಳಿಗೆ 7500 ರೂ. ಅವರ ಬ್ಯಾಂಕ್ ಖಾತೆಗಳಿಗೆ 3 ತಿಂಗಳ ಅವಧಿಗೆ ವರ್ಗಾಯಿಸಬೇಕು.
-ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಬೇಕು. ಉದ್ಯೋಗಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು.







