ಸಾವಳಗಿ ಜಾತ್ರೆ ತಡೆಯಲು ವಿಫಲ: ಪಿಎಸ್ಸೈ, ಪೊಲೀಸ್ ಪೇದೆ ಅಮಾನತು: 10ಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲು

ಕಲಬುರಗಿ, ಎ.22: ಲಾಕ್ಡೌನ್ ಮಧ್ಯೆಯೂ ಎಪ್ರಿಲ್ 8ರಂದು ಮಧ್ಯರಾತ್ರಿ ಸಾವಳಗಿ ಗ್ರಾಮದಲ್ಲಿ ರಥೋತ್ಸವ ನಡೆದಿದ್ದು, ಈ ಸಂಬಂಧ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಇನ್ ಸ್ಪೆಕ್ಟರ್ ಹಾಗೂ ಪಿಸಿಯನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಲಾಕ್ ಡೌನ್ ಜಾರಿಯಲ್ಲಿದ್ದರೂ ಎ.8ರಂದು ಮಧ್ಯರಾತ್ರಿ ಸಾವಳಗಿ ಶಿವಲಿಂಗೇಶ್ವರ ದೇವರ ರಥೋತ್ಸವ ನಡೆದಿತ್ತು. ಕೊರೋನ ಭೀತಿ ನಡುವೆಯೂ ನೂರಾರು ಸಂಖ್ಯೆಯಲ್ಲಿ ಜನರು ಇದರಲ್ಲಿ ಪಾಲ್ಗೊಂಡಿದ್ದರು ಎಂದು 14 ದಿನಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ. ಜಾತ್ರೆ ತಡೆಯಬೇಕಾಗಿದ್ದ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ ಆರೋಪದ್ದಾಗಿ ಪರಿಗಣಿಸಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಸ್ಪೆಕ್ಟರ್ ಸೋಮಶೇಖರ್ ಕಿರದಳ್ಳಿ ಮತ್ತು ಬೀಟ್ ನಿಯೋಜಿತ ಪೇದೆ ಶೈಲಗೌಡ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಹಿಂದೆ ರಾವೂರ್ ಮತ್ತು ಭುಸನೂರು ಗ್ರಾಮದಲ್ಲಿ ರಥೋತ್ಸವ ನಡೆದಿದ್ದು, ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು, ಸಿಡಿಪಿಓ ಮತ್ತು ಪೊಲೀಸ್ ಅಧಿಕಾರಿ ಸೇರಿ ಪಿಡಿಓಗಳನ್ನು ಅಮಾನತು ಗೊಳಿಸಲಾಗಿದೆ.
ಸದ್ಯ ಗ್ರಾಮೀಣ ಪೊಲೀಸರು ಸಾವಳಗಿ ರಥೋತ್ಸವದ ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕಿಂತ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.







