ಉಡುಪಿ: ಕೇಸರಿ ವಲಯದಿಂದ ಹಸಿರು ವಲಯದತ್ತ ದಾಪುಗಾಲು
ಹೊಸ ಸೋಂಕಿಲ್ಲದೇ ಸತತ 24 ದಿನಗಳು
ಉಡುಪಿ, ಎ.22: ಜಿಲ್ಲೆಯಲ್ಲಿ ಕೊನೆಯ ನೋವೆಲ್ ಕೊರೋನ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣ ಪತ್ತೆಯಾಗಿ 24 ದಿನಗಳು ಕಳೆದಿದ್ದು, ಆ ಬಳಿಕ ಜಿಲ್ಲೆಯಲ್ಲಿ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಈಗಾಗಲೇ ತಿಳಿಸಿರು ವಂತೆ ಇನ್ನು ಕೇವಲ ನಾಲ್ಕು ದಿನ ಇದೇ ಸ್ಥಿತಿ ಮುಂದುವರಿದರೆ, ಪ್ರಸ್ತುತ ಕಿತ್ತಲೆ ವಲಯದಲ್ಲಿರುವ ಉಡುಪಿ ಜಿಲ್ಲೆಯು ಹಸಿರು ವಲಯಕ್ಕೆ ಸೇರ್ಪಡೆಗೊಳ್ಳುವ ಅವಕಾಶ ಉಜ್ವಲಗೊಳ್ಳಲಿದೆ.
ಜಿಲ್ಲೆಯಲ್ಲಿ ಈವರೆಗೆ ಮೂರು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿದ್ದು, ಮಾ.29ರಂದು ಕೊನೆಯ ಪ್ರಕರಣ ದಾಖಲಾಗಿದೆ. ಅನಂತರ ಜಿಲ್ಲಾಡಳಿತದ ಅಪರಿಮಿತ ಪರಿಶ್ರಮ ಹಾಗೂ ಜನತೆ, ಅಧಿಕಾರಿಗಳುಲ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದಾಗಿ ಕಳೆದ 24 ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಒಟ್ಟು 28 ದಿನಗಳವರೆಗೆ ಯಾವುದೇ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗದಿದ್ದರೆ ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಗೊಳ್ಳಲಿದೆ.
13 ಮಂದಿ ಗಂಟಲು ದ್ರವ ಪರೀಕ್ಷೆಗೆ: ನೋವೆಲ್ ಕೊರೋನ ವೈರಸ್ (ಕೋವಿಡ್-19)ನ ಗುಣಲಕ್ಷಣಗಳೊಂದಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಇನ್ನೂ 13 ಮಂದಿಯ ಗಂಟಲು ದ್ರವ ಮಾದರಿಯನ್ನು ಬುಧವಾರ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಕಳುಹಿಸಿದ 13 ಗಂಟಲು ದ್ರವ ಸ್ಯಾಂಪಲ್ಗಳಲ್ಲಿ ಒಂದು ಕೋವಿಡ್ ಶಂಕಿತರದ್ದು, ಏಳು ತೀವ್ರ ಉಸಿರಾಟದ ತೊಂದರೆಯಿದ್ದವರದ್ದು. ನಾಲ್ಕು ಶೀತಜ್ವರದಿಂದ ಬಳಲುತ್ತಿರುವವರ ಹಾಗೂ ಒಬ್ಬ ಕೊರೋನ ಹಾಟ್ಸ್ಪಾಟ್ ನಿಂದ ಮರಳಿದವರ ಸ್ಯಾಂಪಲ್ಗಳನ್ನು ಕೊರೋನ ಸೋಂಕಿನ ಪರೀಕ್ಷೆಗೆ ಕುಹಿಸಲಾಗಿದೆ ಎಂದವರು ತಿಳಿಸಿದರು.
ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಿಂದ ಬಾಕಿ ಇದ್ದ 98 ಗಂಟಲು ದ್ರವದ ಸ್ಯಾಂಪಲ್ಗಳಲ್ಲಿ ಇಂದು ಕೇವಲ ಒಂದು ವರದಿ ನೆಗೆಟಿವ್ ಆಗಿ ಬಂದಿದೆ. ಹೀಗಾಗಿ ಬುಧವಾರ ಪರೀಕ್ಷೆಗೆ ಕಳುಹಿಸಿದ 13 ಸ್ಯಾಂಪಲ್ಗಳು ಸೇರಿದಂತೆ ಇನ್ನು ಒಟ್ಟು 110ರ ರದಿ ಇನ್ನು ಬರಬೇಕಾಗಿದೆ ಎಂದರು.
ಇಂದು 11 ಮಂದಿ ಹೊಸದಾಗಿ ಕೋವಿಡ್-19 ರೋಗಲಕ್ಷಣದೊಂದಿಗೆ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಎಂಟು ಮಂದಿ ಪುರುಷರು ಹಾಗೂ ಮೂವರು ಮಹಿಳೆಯಾಗಿದ್ದಾರೆ.ಇಬ್ಬರು ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ, ನಾಲ್ವರು ತೀವ್ರ ಉಸಿರಾಟದ ತೊಂದರೆಗೆ ಹಾಗೂ ಐದು ಮಂದಿ ಶೀತಜ್ವರ ಬಾಧೆಗೆ ದಾಖಲಾಗಿದ್ದಾರೆ. ಇಂದು ನಾಲ್ವರು ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆಯಾಗಿ 254 ಮಂದಿ ಈವರೆಗೆ ಬಿಡುಗಡೆಗೊಂಡಿದ್ದಾರೆ. ಈಗ 52 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ ಎಂದು ಡಾ. ಸೂಡ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 993 ಮಂದಿಯ ಸ್ಯಾಂಪಲ್ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 880 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ. ಪಾಸಿಟಿವ್ ಬಂದವರೆಲ್ಲರೂ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿದಂತೆ ಇಂದು ಮತ್ತೆ 78 ಮಂದಿ ಹೊಸದಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3100 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1892 (ಇಂದು 29) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2325 (65) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 697 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 36 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನೊಂದಿಗೆ ತೀವ್ರ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿರುವ ಭಟ್ಕಳದ 26ರ ಹರೆಯದ ಗರ್ಭಿಣಿ ಮಹಿಳೆಯ ಎರಡನೇ ಸ್ಯಾಂಪಲ್ ವರದಿ ಇಂದು ಸಹ ಬಂದಿಲ್ಲ ಎಂದು ಡಾ.ಸೂಡ ತಿಳಿಸಿದ್ದಾರೆ. ಅವರ ಮೊದಲ ಸ್ಯಾಂಪಲ್ ವರದಿ ನೆಗೆಟಿವ್ ಆಗಿತ್ತು.







