2 ರೂ. ಗೆ ಚಿಕಿತ್ಸೆ ನೀಡುತ್ತಿದ್ದ ನಿಸ್ವಾರ್ಥ ವೈದ್ಯ ಡಾ. ಇಸ್ಮಾಯಿಲ್ ಕೊರೋನಗೆ ಬಲಿ
ಕಂಬನಿ ಮಿಡಿದ ಕರ್ನೂಲ್ ನಗರ
ಕರ್ನೂಲ್ (ಆಂಧ್ರ ಪ್ರದೇಶ), ಎ. 22 : ಕೊರೋನ ಸೋಂಕಿಗೆ ಇತ್ತೀಚಿಗೆ ಹಠಾತ್ತನೆ ಬಲಿಯಾದ ಡಾ. ಕೆ. ಎಂ. ಇಸ್ಮಾಯಿಲ್ (76) ಅವರ ನಿಧನಕ್ಕೆ ಇಡೀ ಕರ್ನೂಲ್ ನಗರವೇ ಕಂಬನಿ ಮಿಡಿಯುತ್ತಿದೆ. ಇದಕ್ಕೆ ಕಾರಣ ಎಂದೂ ಹಣಕ್ಕಾಗಿ ಆಸೆ ಪಡದೆ ಅವರು ನಿಸ್ವಾರ್ಥವಾಗಿ ಸಲ್ಲಿಸುತ್ತಿದ್ದ ವೈದ್ಯಕೀಯ ಸೇವೆ.
"ಅವರೆದುರು ಯಾವಾಗಲು ಬಾಕ್ಸ್ ಇರುತ್ತಿತ್ತು. ಅದರಲ್ಲಿ ರೋಗಿಗಳು ತಮಗಿಷ್ಟದ, ತಮಗೆ ಸಾಧ್ಯವಿರುವಷ್ಟು ಹಣವನ್ನು ಹಾಕಿ ಮತ್ತೆ ಅದರಿಂದ ವಾಪಸ್ ತಮಗೆ ಬೇಕಾದಷ್ಟನ್ನು ತೆಗೆದುಕೊಂಡು ಹೋಗಬಹುದಿತ್ತು. ಜನರು 10, 20 ರೂ ಹಾಕುತ್ತಿದ್ದರು. ಹತ್ತು ರೂಪಾಯಿ ಹಾಕಿ 5 ರೂಪಾಯಿ ವಾಪಸ್ ತೆಗೆಯುತ್ತಿದ್ದರು. 50 ರೂಪಾಯಿ ಹಾಕಿ 30 ರೂ. ವಾಪಸ್ ತೆಗೆಯುತ್ತಿದ್ದರು. ಅವರು ( ಡಾ. ಇಸ್ಮಾಯಿಲ್ ) ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ " ಎಂದು ನೆನಪಿಸುತ್ತಾರೆ ಸ್ಥಳೀಯ ಇತಿಹಾಸಕಾರ ಮತ್ತು ರಾಜಕೀಯ ವಿಶ್ಲೇಷಕ ಕಲ್ಕೂರ ಚಂದ್ರಶೇಖರ್.
"ಅವರು ಎಂದೂ ದುಡ್ಡಿನ ಮುಖ ನೋಡಿದವರೇ ಅಲ್ಲ. ರೋಗಿಗಳು ಎಷ್ಟು ಕೊಟ್ಟರು ಎಂದು ಗಮನಿಸಿದವರೇ ಅಲ್ಲ. ಜನರು ತಮಗೆ ಸಾಧ್ಯವಿದ್ದಷ್ಟು ಕೊಡುತ್ತಿದ್ದರು ಅಷ್ಟೇ " ಎನ್ನುತ್ತಾರೆ ಡಾ. ಇಸ್ಮಾಯಿಲ್ ಅವರ ಕುಟುಂಬ ಸ್ನೇಹಿತ ಅಬ್ದುಲ್ ರವೂಫ್.
" ಜನರು ಮೊದಲು ಕೇವಲ 2 ರೂ ಕೊಡುತ್ತಿದ್ದರು. ಈಗ ಅವರ ಕೊನೆ ದಿನಗಳವರೆಗೂ 10, 20 ರೂಪಾಯಿ ಕೊಡುತ್ತಿದ್ದರು. 80, 90 ರ ದಶಕಗಳಲ್ಲಿ ಅವರಿಗೆ 2 ರೂ ಡಾಕ್ಟರ್ ಎಂದೇ ಹೆಸರಾಗಿತ್ತು. ಏಕೆಂದರೆ ಅವರ ಅಧಿಕೃತ ಫೀಸು 2 ರೂ ಎಂದೇ ಜನರು ಭಾವಿಸಿದ್ದರು. ಯಾರಿಗಾದರೂ ಕೊಡಲು ದುಡ್ಡು ಇಲ್ಲದಿದ್ದರೆ ಅವರು ಕೇಳುತ್ತಲೇ ಇರಲಿಲ್ಲ " ಎನ್ನುತ್ತಾರೆ ರವೂಫ್.
" ಅವರು ಸರ್ವಧರ್ಮೀಯರಿಗೆ ಪ್ರಿಯ ಡಾಕ್ಟರ್ ಆಗಿದ್ದರು. ಇಲ್ಲಿನ ಜೈನರು, ಮಾರ್ವಾಡಿಗಳೂ ಅವರ ಬಳಿ ಬರುತ್ತಿದ್ದರು. ನಾನೂ ಏನಾದರು ಅನಾರೋಗ್ಯ ಇದ್ದರೆ ಹೈದರಾಬಾದ್ ನಿಂದ ಇಲ್ಲಿಗೆ ಬಂದು ಅವರನ್ನೇ ಭೇಟಿಯಾಗುತ್ತಿದ್ದೆ " ಎಂದು ಸ್ಮರಿಸುತ್ತಾರೆ ವಕೀಲೆ ಶಫಾತ್ .
" ಅವರು ಯಾವತ್ತೂ ಬೇಡದ ಟೆಸ್ಟ್ ಗಳನ್ನು ಮಾಡಿಸಿದವರಲ್ಲ. ಟೆಸ್ಟ್ ಮಾಡಿಸಿದ ಮೇಲೆ ಜನರ ಬಳಿ ದುಡ್ಡಿದ್ದರೆ ಮಾತ್ರ ತೆಗೆದುಕೊಳ್ಳುತ್ತಿದ್ದರು. ಇಲ್ಲದಿದ್ದರೆ ಬಿಟ್ಟು ಬಿಡುತ್ತಿದ್ದರು " ಎನ್ನುತ್ತಾರೆ ರವೂಫ್.
" ಸಂಜೆ ಏಳು ಗಂಟೆಗೆ ರೋಗಿಗಳನ್ನು ನೋಡಲು ಪ್ರಾರಂಭಿಸಿದರೆ ಕೊನೆಯ ರೋಗಿವರೆಗೆ ಎಲ್ಲರನ್ನೂ ನೋಡಿಯೇ ಅವರು ದಿನ ಮುಗಿಸುತ್ತಿದ್ದರು. ಹೀಗಾಗುವಾಗ ಕೆಲವೊಮ್ಮೆ ರಾತ್ರಿ 1 ಅಥವಾ 2 ಗಂಟೆಯಾಗುವುದೂ ಇದೆ. ಒಮ್ಮೆ ನಾನು ಅವರ ಮನೆಯಲ್ಲೇ ಇದ್ದಾಗ ರಾತ್ರಿ 2 ಗಂಟೆಗೆ ಒಬ್ಬ ವ್ಯಕ್ತಿ ಬಂದು ಅವರನ್ನು ಎಬ್ಬಿಸಿ ಹೊಟ್ಟೆ ನೋವು ಎಂದ. ಅವರು ಪರೀಕ್ಷಿಸಿ ಔಷಧಿ ಕೊಟ್ಟರು. ಅದನ್ನು ತೆಗೆದುಕೊಂಡು ಧನ್ಯವಾದ ಸಲ್ಲಿಸಿ ಸೀದಾ ಹೋಗಿಬಿಟ್ಟ ಆ ವ್ಯಕ್ತಿ. ಅವನು ದುಡ್ಡು ಕೊಡಲೂ ಇಲ್ಲ, ಇವರು ಕೇಳಲೂ ಇಲ್ಲ. ರಮಝಾನ್ ಸಮಯದಲ್ಲೂ ಡಾ. ಇಸ್ಮಾಯಿಲ್ ಹಾಗೆಯೆ ಎಲ್ಲರಿಗೂ ಸಿಗುತ್ತಿದ್ದರು " ಎಂದು ವಿವರ ನೀಡಿದ್ದಾರೆ ರವೂಫ್.
ಕರ್ನೂಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಮಾಡಿದ ಬಳಿಕ ಅಲ್ಲಿನ ವೈದ್ಯಕೀಯ ಆಸ್ಪತ್ರೆಯಲ್ಲಿ ನಿರೀಕ್ಷಕರಾಗಿ ಕೆಲಸ ಮಾಡಿದ ಡಾ. ಇಸ್ಮಾಯಿಲ್ 25 ವರ್ಷಗಳ ಹಿಂದೆ ನಿವೃತ್ತರಾಗಿ ಕೆ ಎಂ ಹಾಸ್ಪಿಟಲ್ ಎಂಬ ಸ್ವಂತ ಆಸ್ಪತ್ರೆ ತೆರೆದು ಸೇವೆ ಪ್ರಾರಂಭಿಸಿದರು. ತಮ್ಮ ಕೊನೆಯ ದಿನ ಎಂದಿನಂತೆ ರೋಗಿಗಳನ್ನು ನೋಡಿ ರಾತ್ರಿ ತಡವಾಗಿ ಬಂದು ಮಲಗಿದ ಅವರು ಬೆಳಗ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಎರಡು ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ. ಅವರಿಗೆ ಕೊರೋನ ಸೋಂಕು ತಗಳಿದ್ದು ದೃಢವಾಗಿದೆ. ಅವರ ಪತ್ನಿ, ಪುತ್ರ ಸಹಿತ ಕುಟುಂಬದ ಆರು ಮಂದಿಗೆ ಸೋಂಕು ದೃಢವಾಗಿದೆ. ಅವರ ಆಸ್ಪತ್ರೆಯನ್ನು ಮುಚ್ಚಲಾಗಿದೆ.
ಸರ್ಕಾರದ ನಿರ್ದೇಶನದಂತೆ ಅವರ ಅಂತಿಮ ಸಂಸ್ಕಾರಕ್ಕೆ ಐದು ಮಂದಿ ಮಾತ್ರ ಭಾವಹಿಸಿದ್ದರು. " ಇದು ಬಹಳ ದುರದೃಷ್ಟಕರ. ಬೇರೆ ಸಂದರ್ಭದಲ್ಲಾಗಿದ್ದರೆ ಅವರ ಅಂತಿಮ ಸಂಸ್ಕಾರಕ್ಕೆ ಅರ್ಧ ಕರ್ನೂಲ್ ನಗರವೇ ಇಲ್ಲಿರುತ್ತಿತ್ತು " ಎನ್ನುತ್ತಾರೆ ರವೂಫ್.
ಮಾಹಿತಿ, ಚಿತ್ರಕೃಪೆ : thenewsminute.com