ಲಾಕ್ಡೌನ್ನಲ್ಲಿ ರಿಯಾಯಿತಿ ಬಗ್ಗೆ ಗುರುವಾರ ನಿರ್ಧಾರ : ಉಡುಪಿ ಡಿಸಿ
ಉಡುಪಿ, ಎ.22: ಗುರುವಾರ ಮಧ್ಯರಾತ್ರಿಯಿಂದ ಜಾರಿಗೊಳ್ಳುವಂತೆ ಅನುಷ್ಠಾನಕ್ಕೆ ಬರುವ ಲಾಕ್ಡೌನ್ನ ಹೊಸ ಮಾರ್ಗದರ್ಶಿ ಸೂತ್ರದಲ್ಲಿ ಗ್ರಾಮೀಣ ಪ್ರದೇಶದ ಮಟ್ಟಿಗೆ ಕೆಲವು ರಿಯಾಯಿತಿಗಳನ್ನು ಮಾತ್ರ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಹಿಂದಿನಂತೆಯೇ ಎಲ್ಲವೂ ಮುಂದುವರಿ ಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿಗಳನ್ನು ನೀಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ, ಕಟ್ಟಡ ನಿರ್ಮಾಣ, ದುರಸ್ಥಿ ರಸ್ತೆ ಮತ್ತು ನೀರಾವರಿ ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡ ಲಾಗುವುದು. ಆದರೆ ನಗರ ಪ್ರದೇಶಗಳಲ್ಲಿ ಎಲ್ಲವೂ ಹಿಂದಿನಂತೆಯೇ ಇರಲಿವೆ ಎಂದರು.
ನಗರದಲ್ಲಿರುವ ಮಾಲ್, ಮೊಬೈಲ್, ಇಲೆಕ್ಟ್ರಾನಿಕ್ಸ್ ಉಪಕರಣಗಳು ಸೇರಿದಂತೆ ಎಲ್ಲಾ ಅಂಗಡಿಗಳು ಮುಚ್ಚಿರಲಿವೆ. ಈ ಮೊದಲಿನಂತೆ ರೆಸ್ಟೋರೆಂಟ್ ಗಳು ತೆರೆದಿದ್ದರೂ ಕೇವಲ ಪಾರ್ಸೆಲ್ಗಳನ್ನು ನೀಡಲು ಮಾತ್ರ ಅವಕಾಶವಿದೆ. ಅಲ್ಲೇ ಸರಬರಾಜಿಗೆ ಅವಕಾಶವಿಲ್ಲ ಎಂದರು.
ಈಗ ಬೆಳಗ್ಗೆ 7ರಿಂದ 11 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಅವಕಾಶವನ್ನು ಇನ್ನಷ್ಟು ವಿಸ್ತರಿಸಬೇಕೆ ಎಂಬುದರ ಕುರಿತು ನಾಳೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.







