ಬೆಳೆ ನಾಶದ ಭೀತಿ: ಹಣ್ಣು, ತರಕಾರಿ ವಿದೇಶಕ್ಕೆ ರಫ್ತು ಮಾಡಲು ರಾಜ್ಯ ಸರಕಾರ ನಿರ್ಧಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.22: ಕೊರೋನದಿಂದ ಸೂಕ್ತ ಮಾರುಕಟ್ಟೆ ಇಲ್ಲದೆ ಬೆಳೆ ನಾಶದ ಭೀತಿಯಲ್ಲಿರುವ ರೈತರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹಣ್ಣು, ತರಕಾರಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಸರಕಾರ ನಿರ್ಧರಿಸಿದೆ. ಈ ಸಂಬಂಧ ಸಿಎಂ ಬಿಎಸ್ವೈ ಜೊತೆ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ ಚರ್ಚೆ ನಡೆಸಿದ್ದಾರೆ.
ಪ್ರತಿವಾರ 220 ಮೆಟ್ರಿಕ್ ಟನ್ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿ ವಿದೇಶಕ್ಕೆ ರಫ್ತಾಗಲಿದೆ. ಕಾರ್ಗೋ ದರ ಏರಿಕೆಯಿಂದಾಗಿ ರಫ್ತು ಸ್ಥಗಿತವಾಗಿತ್ತು. ತೋಟಗಾರಿಕೆ ಸಚಿವ ನಾರಾಯಣಗೌಡ ರಫ್ತುದಾರರು ಹಾಗೂ ಕೆಪೆಕ್, ಎಪೆಡಾ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದರು. ರಫ್ತಿಗೆ ಇರುವ ಸಮಸ್ಯೆಯ ಮಾಹಿತಿಯನ್ನು ಸಚಿವರು ಪಡೆದಿದ್ದರು. ಇಂದು ರಫ್ತುದಾರರು, ಆಯಾ ದೇಶಗಳಲ್ಲಿನ ತರಕಾರಿ ಹಾಗೂ ಹಣ್ಣಿನ ಬೇಡಿಕೆಯ ಕುರಿತು ಮಾಹಿತಿ ಕಲೆ ಹಾಕಿ ಸಚಿವರಿಗೆ ನೀಡಿದ್ದಾರೆ.
ಈ ಮಾಹಿತಿಯನ್ನು ಪಡೆದು ಸಚಿವ ನಾರಾಯಣಗೌಡ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದಾರೆ. ಕಾರ್ಗೋ ದರ ಇಳಿಕೆ ಆಗಬೇಕು. ರಾಜ್ಯದ ಹಣ್ಣು, ತರಕಾರಿಗೆ ಕಾರ್ಗೋದವರು ಆದ್ಯತೆ ನೀಡಬೇಕು ಎಂಬಿತ್ಯಾದಿ ವಿಚಾರದ ಬಗ್ಗೆ ಸಿಎಂ ಬಳಿ ಸಚಿವರು ಮಾತನಾಡಿದ್ದಾರೆ.
ಸಿಎಂ ಮೂಲಕ ಕೇಂದ್ರ ವಿಮಾನಯಾನ ಸಚಿವರ ಜೊತೆ ಚರ್ಚಿಸಿ, ಒಂದೆರಡು ದಿನಗಳಲ್ಲಿ ರಫ್ತಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ವಿವಿಧ ರಫ್ತುದಾರರಿಂದ 10 ಕ್ಕೂ ಅಧಿಕ ದೇಶಗಳಿಗೆ ಹಣ್ಣು, ತರಕಾರಿ ರಫ್ತಾಗಲಿದೆ.
ಬೇರೆ ಬೇರೆ ರಫ್ತುದಾರರಿಂದ ಪ್ರತಿವಾರ ಲಂಡನ್ ಗೆ 60 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿ, ದೋಹಾ, ಖತಾರ್, ದುಬೈಗೆ 89 ಮೆಟ್ರಿಕ್ಟನ್, ಯುಎಸ್ಎ, ಕೆನಡಾಗೆ 18 ಮೆಟ್ರಿಕ್ ಟನ್, ಆಸ್ಟ್ರೇಲಿಯಾಗೆ 22.50 ಮೆಟ್ರಿಕ್ ಟನ್, ಮಾಲ್ಡೀವ್ಸ್ ಗೆ 25 ಮೆಟ್ರಿಕ್ ಟನ್, ಇರಾನ್ಗೆ 5 ಮೆಟ್ರಿಕ್ ಟನ್, ಸಿಂಗಪುರ್ ಗೆ 2 ಮೆಟ್ರಿ ಕ್ಟನ್ ಹಣ್ಣು ಮತ್ತು ತರಕಾರಿ ರಫ್ತಾಗಲಿದೆ.







