ಧರ್ಮದ ಕಾರಣ ನೀಡಿ ಡೆಲಿವರಿ ಬಾಯ್ ನಿಂದ ದಿನಸಿ ಸ್ವೀಕರಿಸದ ವ್ಯಕ್ತಿಯ ಬಂಧನ
![ಧರ್ಮದ ಕಾರಣ ನೀಡಿ ಡೆಲಿವರಿ ಬಾಯ್ ನಿಂದ ದಿನಸಿ ಸ್ವೀಕರಿಸದ ವ್ಯಕ್ತಿಯ ಬಂಧನ ಧರ್ಮದ ಕಾರಣ ನೀಡಿ ಡೆಲಿವರಿ ಬಾಯ್ ನಿಂದ ದಿನಸಿ ಸ್ವೀಕರಿಸದ ವ್ಯಕ್ತಿಯ ಬಂಧನ](/images/placeholder.jpg)
ಮುಂಬೈ: ತಾನು ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದ ದಿನಸಿ ಡೆಲಿವರಿ ಮಾಡಲು ಬಂದ ವ್ಯಕ್ತಿ ಅಲ್ಪಸಂಖ್ಯಾತ ಸಮುದಾಯದವನು ಎಂಬ ಕಾರಣಕ್ಕೆ ಸಾಮಗ್ರಿಗಳನ್ನು ನಿರಾಕರಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನನ್ನು ಥಾಣೆ ಸೆಶನ್ಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು ರೂ 15,000 ವೈಯಕ್ತಿಕ ಬಾಂಡ್ ಆಧಾರದಲ್ಲಿ ಆತನನ್ನು ಬಿಡುಗಡೆಗೊಳಿಸಲಾಗಿದೆ.
ಮುಂಬೈಯ ಮೀರಾ ರೋಡ್ ನಿವಾಸಿ ಘನಶ್ಯಾಮ್ ಚತುರ್ವೇದಿ (51) ಎಂಬಾತನೇ ಆರೋಪಿ.
ಲಾಕ್ ಡೌನ್ ನಿರ್ಬಂಧಗಳಿರುವ ಹಿನ್ನೆಲೆಯಲ್ಲಿ ಘನಶ್ಯಾಮ್ ಆರ್ಡರ್ ಮಾಡಿದ್ದ ದಿನಸಿ ವಸ್ತುಗಳನ್ನು ಆತ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಗೇಟ್ ಸಮೀಪ ಡೆಲಿವರಿ ಮಾಡಲು ಮಾಸ್ಕ್ ಹಾಗೂ ಕೈಗವಸು ಧರಿಸಿದ್ದ ಡೆಲಿವರಿ ಮಾಡುವ ವ್ಯಕ್ತಿ ಕಾದಿದ್ದ. ಘನಶ್ಯಾಮ್ ಮತ್ತಾತನ ಪತ್ನಿ ಅದನ್ನು ಸ್ವೀಕರಿಸಲು ಬಂದಿದ್ದ ಸಂದರ್ಭ ಆತನ ಪತ್ನಿ ವಸ್ತುಗಳೆಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾಗ ಘನಶ್ಯಾಂ ಡೆಲಿವರಿ ಬಾಯ್ ಹೆಸರು ಕೇಳಿದ್ದ. ಆತ ಅಲ್ಪಸಂಖ್ಯಾತ ಸಮುದಾಯದವನು ಎಂದು ತಿಳಿಯುತ್ತಲೇ ವಸ್ತುಗಳೆಲ್ಲವನ್ನೂ ಮರಳಿಸುವಂತೆ ಪತ್ನಿಗೆ ತಿಳಿಸಿದ್ದ.
ಈ ಘಟನೆಯನ್ನು ಡೆಲಿವರಿ ಬಾಯ್ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದು ಅವರ ಸಲಹೆಯಂತೆ ಪೊಲೀಸ್ ದೂರು ದಾಖಲಿಸಿದ್ದ.