ಮಾನವೀಯತೆ ಮೆರೆದ ಧಾರವಾಡ ಪಿಎಸ್ಐ ಮಹೇಂದ್ರ ನಾಯಕ್: ಬಡವರಿಗೆ 2.50 ಲಕ್ಷ ರೂ. ಮೌಲ್ಯದ ದಿನಸಿ ವಿತರಣೆ

ಬೆಂಗಳೂರು, ಎ.23: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ ಎಚ್ಚರವಹಿಸಿ ಲಾಕ್ಡೌನ್ ಯಶಸ್ವಿಗೊಳಿಸಲು ನಿತ್ಯ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯದೊಂದಿಗೆ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿರುವ ಮಹೇಂದ್ರ ನಾಯಕ್, ಸುಮಾರು 2.50 ಲಕ್ಷ ರೂ. ಮೌಲ್ಯದ ದಿನಸಿಯನ್ನು ತಮ್ಮ ಸ್ವಂತ ಹಣದಲ್ಲಿ ಠಾಣಾ ವ್ಯಾಪ್ತಿಯ ಬಡವರು, ನಿರ್ಗತಿಕರು, ಅಸಹಾಯಕರಿಗೆ ಹಂಚಿದ್ದಾರೆ.
ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿಯಾದ ಮಹೇಂದ್ರ ನಾಯಕ್ ಅವರು ಹಸಿದವರಿಗೆ, ಅಸಹಾಯಕರಿಗೆ ನಿತ್ಯ ನೆರವಾಗುತ್ತಿದ್ದಾರೆ. ತಮ್ಮ ಠಾಣೆಯ ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್ ಪೊಲೀಸರ ಸಹಾಯದಿಂದ ಆಯಾ ಗ್ರಾಮಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಇಟ್ಟಂಗಿ ಭಟ್ಟಿ ಕಾರ್ಮಿಕರು, ಕೂಲಿಕಾರ್ಮಿಕರು, ಮಕ್ಕಳಿಲ್ಲದ ವಯೊವೃದ್ದರು ಮತ್ತು ಪಡಿತರ ಚೀಟಿ ಹೊಂದಿರದೆ ಯಾವುದೆ ಸೌಲಭ್ಯ ಪಡೆಯದಿರುವ ಕುಟುಂಬಗಳನ್ನು ಗುರುತಿಸಿ, ತಮ್ಮ ಸಿಬ್ಬಂದಿಗಳ ಸಹಾಯದಿಂದ ತಮ್ಮದೆ ವಾಹನದಲ್ಲಿ ನೇರವಾಗಿ ಅಸಹಾಯಕರ ಮನೆಗೆ ದಿನಸಿ ಪದಾರ್ಥಗಳನ್ನು ತಲುಪಿಸುತ್ತಿದ್ದಾರೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಪಿಎಸ್ಐ ಮಹೇಂದ್ರ ನಾಯಕ್ ಅವರ ಕಾರ್ಯ ಮೆಚ್ಚಿ, ಅಮ್ಮಿನಭಾವಿ ಗ್ರಾಮದಲ್ಲಿ ದಿನಸಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅವರ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಸಹಾಯ, ಸಹಕಾರದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಹಳ್ಳಿಗೇರಿ, ಯರಿಕೊಪ್ಪ, ನರೇಂದ್ರ, ಕ್ಯಾರಕೊಪ್ಪ, ನಿಗದಿ ಮತ್ತು ಅಮ್ಮಿನಭಾವಿ ಸೇರಿದಂತೆ ಸುಮಾರು 20 ಹಳ್ಳಿಯ ಅತಿ ಬಡವ ಮತ್ತು ಅಸಹಾಯಕ 300 ಕುಟುಂಬಗಳಿಗೆ ರವೆ, ಬೆಲ್ಲ, ಅಕ್ಕಿ, ಅಡುಗೆಎಣ್ಣೆ, ಬೇಳೆಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.
ಧಾರವಾಡ ತಾಲೂಕಿನ 20 ಹಳ್ಳಿಗಳ 300 ಕುಟುಂಬಗಳಿಗೆ ಒಟ್ಟು 3 ಕ್ವಿಂಟಾಲ್ ರವೆ, 3 ಕ್ವಿಂಟಾಲ್ ಬೆಲ್ಲ, 5 ಕ್ವಿಂಟಾಲ್ ಅಕ್ಕಿ, 250 ಲೀಟರ್ ಅಡುಗೆ ಎಣ್ಣೆ ಮತ್ತು ಸುಮಾರು 20 ಸಾವಿರ ಸಂತೂರ್ ಸಾಬೂನುಗಳನ್ನು ಹಂಚಿದ್ದಾರೆ. ಇದಲ್ಲದೆ ಮಹೇಂದ್ರ ನಾಯಕ್ ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಹಾಯದಿಂದ ತಮ್ಮ ಸ್ವಂತ ಊರು ವಿಜಯಪುರ ತಾಲೂಕಿನ ಐನಾಪುರ ತಾಂಡ ಸೇರಿದಂತೆ ವಿಜಯಪುರ ಹಾಗೂ ಚಡಚಣ ತಾಲೂಕಿನ 15 ಹಳ್ಳಿಯ ಕೂಲಿ ಕಾರ್ಮಿಕರಿಗೆ, ಅಸಹಾಯಕರಿಗೆ, ಬಡವರಿಗೆ ಆಹಾರದ ಕಿಟ್ ವಿತರಿಸಿದ್ದಾರೆ.
ಪ್ರತಿ ಕಿಟ್ದಲ್ಲಿ 5ಕೆಜಿ ರವೆ, 5ಕೆಜಿ ಅಕ್ಕಿ ಮತ್ತು 2 ಕೆಜಿ ಬೆಲ್ಲ ಸೇರಿ ಅಡುಗೆಎಣ್ಣೆ ಕಾಳು ನೀಡಿದ್ದಾರೆ. ಕರ್ತವ್ಯದ ನಡುವೆಯೂ ತಮ್ಮ ಸಹಾಯಕ ಸಿಬ್ಬಂದಿಗಳ ನೆರವು ಹಾಗೂ ಸಹಕಾರದಿಂದ ಅಗತ್ಯವಿರುವವರಿಗೆ ತಮ್ಮ ಸ್ವಂತ ಹಣದಿಂದ, ತಮ್ಮದೆ ವಾಹನದಲ್ಲಿ ದಿನಸಿ, ಆಹಾರಧಾನ್ಯಗಳನ್ನು ವಿತರಿಸುವ ಮೂಲಕ ಜನರ ಸೇವೆ ಮಾಡುತ್ತಿರುವ ಪಿಎಸ್ಐ ಮಹೇಂದ್ರ ನಾಯಕ್ ಇತರರಿಗೆ ಮಾದರಿಯಾಗಿದ್ದಾರೆ.







