7 ಲಕ್ಷ ಮಾತೃಪೂರ್ಣ ಫಲಾನುಭವಿಗಳಿಗೆ ಮೇ 3ರವರೆಗೆ ಆಗುವಷ್ಟು ಆಹಾರ ಪದಾರ್ಥ ವಿತರಣೆ
ಬೆಂಗಳೂರು, ಎ.23: ಕೊರೋನ ಭೀತಿ ಹಿನ್ನೆಲೆ ರಾಜ್ಯಾದ್ಯಂತ ಲಾಕ್ಡೌನ್ ಮುಂದುವರಿಸಲಾಗಿದ್ದು, ಮಾತೃಪೂರ್ಣ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಆಹಾರ ಪದಾರ್ಥಗಳನ್ನು ಮೇ 3ರವರೆಗೆ ವಿಸ್ತರಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಿಡಿಸಿದೆ.
ರಾಜ್ಯದಲ್ಲಿರುವ ಏಳು ಲಕ್ಷ ಫಲಾನುಭವಿಗಳಿಗೆ ಈಗಾಗಲೇ ಎ.15ರವರೆಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡಲಾಗಿದ್ದು, ಲಾಕ್ಡೌನ್ ಮುಂದುವರಿದ ಹಿನ್ನೆಲೆ ಯೋಜನೆಯನ್ನು ವಿಸ್ತರಿಸಲಾಗಿದೆ. ವಾರದೊಳಗೆ ಅಕ್ಕಿ, ಬೇಳೆ, ಹಾಲಿನ ಪುಡಿ ಒಳಗೊಂಡ ಕಿಟ್ ಅನ್ನು ಫಲಾನುಭವಿಗಳ ಮನೆಗೆ ವಿತರಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ.
ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸಿ ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಲು ಶೇ. 100ರಷ್ಟು ಗುರಿ ಸಾಧಿಸುವ ಉದ್ದೇಶದಿಂದ 2017 ಅ.2ರಂದು ರಾಜ್ಯ ಸರಕಾರ ಮಾತೃಪೂರ್ಣ ಯೋಜನೆ ಅನುಷ್ಠಾನಕ್ಕೆ ತರಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 8 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಇದರಲ್ಲಿ 7 ಲಕ್ಷ ಮಂದಿ ಯೋಜನೆಯ ಬಿಸಿಯೂಟ ಪ್ರಯೋಜನೆ ಪಡೆದಿದ್ದಾರೆ. ಇದರಡಿ, ಮಹಿಳೆ ಗರ್ಭ ಧರಿಸಿದ ದಿನದಿಂದ ಹೆರಿಗೆಯಾದ 6 ತಿಂಗಳವರೆಗೆ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ, ಮೊಳಕೆಕಾಳು ಸಹಿತ ಪೌಷ್ಟಿಕಾಂಶ ಭರಿತ ಬಿಸಿಯೂಟ, ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸಲಾಗುತ್ತದೆ.
ರಾಜ್ಯದಲ್ಲಿ ಮಾತೃಪೂರ್ಣ ಯೋಜನೆ ಯಶಸ್ವಿಯಾಗಿ ಜರುಗುತ್ತಿದ್ದು, 3 ಜಿಲ್ಲೆಗಳಲ್ಲಿ ಶೇ. 90, 23 ಜಿಲ್ಲೆಗಳಲ್ಲಿ ಶೇ.60ರಷ್ಟು ಪ್ರಗತಿ ಸಾಧಿಸಿದೆ. ಮುಖ್ಯವಾಗಿ ಯೋಜನೆಯಡಿ ಹೆಚ್ಚಿನ ಗರ್ಭಿಣಿಯರು ಮತ್ತು ಬಾಣಂತಿಯರು ಬಿಸಿಯೂಟ ಸೇವಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಕಲಬುರಗಿ ಪಾತ್ರವಾಗಿದೆ. ಆದರೆ, ಯೋಜನೆಗೂ ಕೊರೋನ ಕರಿನೆರಳು ಬಿದ್ದಿದ್ದು, ಲಾಕ್ ಡೌನ್ನಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬಂದು ಊಟ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಅಂಗನವಾಡಿ ಕೇಂದ್ರಗಳತ್ತಾ ಮುಖ ಹಾಕದಿರುವುದರಿಂದಾಗಿ ಇಲಾಖೆಯೂ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಮೇ 3 ರವರೆಗೆ ಬೇಕಾದ ಆಹಾರ ಪದಾರ್ಥಗಳನ್ನು ಫಲಾನುಭವಿಗಳ ಮನೆಗೆ ನೀಡಲು ಇಲಾಖೆ ಸೂಚಿಸಿದೆ.
ವಾರದೊಳಗೆ ಫಲಾನುಭವಿಗಳ ಕೈಗೆ ಆಹಾರ ಪದಾರ್ಥ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಆಹಾರ ಪದಾರ್ಥಗಳ ಕಿಟ್ ಅನ್ನು ಫಲಾನುಭವಿಗಳಿಗೆ ನೀಡಬೇಕು ಎಂದು ಎ.15ರಂದು ಮತ್ತೊಂದು ಸುತ್ತೋಲೆ ಹೊರಡಿಸಲಾಗಿದೆ. ಈಗಾಗಲೇ ಒಂದು ತಿಂಗಳಿಗಾಗುವಷ್ಟು ಧಾನ್ಯಗಳನ್ನು ನೀಡಲಾಗಿದ್ದು, ಲಾಕ್ ಡೌನ್ ಮುಂದುವರಿದಿರುವುದರಿಂದ ಯೋಜನೆಯನ್ನು ಮುಂದುವರಿಸಲಾಗಿದೆ. ಎರಡನೆ ಹಂತದಲ್ಲಿ ಧಾನ್ಯಗಳು ಇರುವ ಕಿಟ್ಗಳನ್ನು ವಾರದೊಳಗೆ ವಿತರಿಸಲಾಗುವುದು. ಯಾರಿಗೆ ವಿತರಿಸಲಾಗಿದೆ ಎಂಬುದರ ಬಗ್ಗೆ ಜಿಲ್ಲಾವಾರು ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಪ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಒಬ್ಬ ಫಲಾನುಭವಿಗೆ 378 ರೂ. ವೆಚ್ಚದ ಆಹಾರ ಪದಾರ್ಥ ವಿತರಣೆ...
ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದ ಹಿತದೃಷ್ಟಿಯಿಂದ ಮಾತೃಪೂರ್ಣ ಯೋಜನೆಯಡಿ ಪ್ರತಿದಿನ ಒಬ್ಬರಿಗೆ 21 ರೂ. ನಿಗದಿ ಪಡಿಸಲಾಗಿದ್ದು, ಏ. 15 ರಿಂದ ಮೇ 3ರ ವರೆಗೆ 18 ದಿನಕ್ಕೆ ಒಬ್ಬ ಫಲಾನುಭವಿಗೆ 378 ರೂ. ವೆಚ್ಚದ ಆಹಾರ ಪದಾರ್ಥ ಒಳಗೊಂಡಿರುವ ಕಿಟ್ ಅನ್ನು ನೀಡಲಾಗುವುದು. ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬ ಬಗ್ಗೆ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಮೊಟ್ಟೆ, ಹಾಲಿನ ಪುಡಿ, ಚಿಕ್ಕಿ, ಅಕ್ಕಿ, ಬೇಳೆ ಒಳಗೊಂಡ ಕಿಟ್ ಅನ್ನು ಸಿದ್ಧಪಡಿಸಿ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ, ಚುಚ್ಚುಮದ್ದು, ಗರ್ಭಿಣಿ ಮತ್ತು ಬಾಣಂತಿಯರಿಗೆ ಚುಚ್ಚುಮದ್ದು, ಕ್ಯಾಲ್ಶಿಯಂ ಮಾತ್ರೆಗಳನ್ನು ನೀಡುವ ಸಮಯದಲ್ಲಿ ಫಲಾನುಭವಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ಕರೆತಂದು ಸೇವೆಗಳನ್ನು ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಿದೆ.
ಮಾತೃಪೂರ್ಣ ಯೋಜನೆಯೂ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಕೊರೋನ ಭೀತಿ ಹಿನ್ನೆಲೆ ಲಾಕ್ಡೌನ್ ಇರುವುದರಿಂದ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಫಲಾನುಭವಿಗಳ ಮನೆಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಆಹಾರ ಪದಾರ್ಥ ನೀಡಲು ನಿರ್ಧರಿಸಿ, ಆದೇಶ ನೀಡಲಾಗಿದೆ.
-ಕೆ.ಎ.ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ







