ಭಾರತದಲ್ಲಿ ಲಾಕ್ಡೌನ್ ಬಳಿಕ ಕೊರೋನ ಸಾವಿನ ಪ್ರಮಾಣದಲ್ಲಿ ಕುಸಿತ: ಅಧಿಕಾರಿಗಳ ಹೇಳಿಕೆ
![ಭಾರತದಲ್ಲಿ ಲಾಕ್ಡೌನ್ ಬಳಿಕ ಕೊರೋನ ಸಾವಿನ ಪ್ರಮಾಣದಲ್ಲಿ ಕುಸಿತ: ಅಧಿಕಾರಿಗಳ ಹೇಳಿಕೆ ಭಾರತದಲ್ಲಿ ಲಾಕ್ಡೌನ್ ಬಳಿಕ ಕೊರೋನ ಸಾವಿನ ಪ್ರಮಾಣದಲ್ಲಿ ಕುಸಿತ: ಅಧಿಕಾರಿಗಳ ಹೇಳಿಕೆ](https://www.varthabharati.in/sites/default/files/images/articles/2020/04/24/241307-1587738208.jpg)
ಮುಂಬೈ, ಎ.24: ಕೊರೊನ ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೊಳಿಸಿದ ಬಳಿಕ ಭಾರತದ ಕೆಲವು ಭಾಗಗಳಲ್ಲಿ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶ್ವದಲ್ಲಿ 2.7 ಮಿಲಿಯನ್ಗೂ ಅಧಿಕ ಜನರಿಗೆ ಸೋಂಕು ತಗುಲಿರುವ ಮತ್ತು ಸುಮಾರು 1,90,000 ಜನರ ಸಾವಿಗೆ ಕಾರಣವಾಗಿರುವ ಕೊರೋನ ವೈರಸ್ನ ವಾಸ್ತವ ಪ್ರಭಾವವನ್ನು ನಿರ್ಧರಿಸಲು ಮರಣ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದೆ. ಇತ್ತೀಚಿನ ವಾರಗಳಲ್ಲಿ ಕೆಲವು ದೇಶಗಳಲ್ಲಿ ಮರಣ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ ಭಾರತದಲ್ಲಿ, ಕನಿಷ್ಟ ಕೆಲವು ಪ್ರದೇಶಗಳಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿಯಿದೆ. ಇದು ನಿಜಕ್ಕೂ ಆಶ್ಚರ್ಯಕರವಾಗಿದೆ. ಜನವರಿಯಲ್ಲಿ ನಮ್ಮ ಸಂಸ್ಥೆ ದಿನಕ್ಕೆ ಸರಾಸರಿ ಐದು ಅಂತ್ಯಕ್ರಿಯೆ ನಿರ್ವಹಿಸಿದ್ದರೆ ಎಪ್ರಿಲ್ನಲ್ಲಿ ಸರಾಸರಿ 3ಕ್ಕೆ ಇಳಿದಿದೆ ಎಂದು ಕೋಲ್ಕತಾ ಮತ್ತು ಬೆಂಗಳೂರಿನಲ್ಲಿ ಅಂತ್ಯಕ್ರಿಯೆಯ ಕಾರ್ಯ ನಿರ್ವಹಿಸುತ್ತಿರುವ ‘ಅಂತ್ಯೇಷ್ಟಿ ಫ್ಯುನರಲ್ ಸರ್ವಿಸಸ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೃತಿ ರೆಡ್ಡಿ ಹೇಳಿದ್ದಾರೆ.
ಕೊರೊನ ವೈರಸ್ ಲಾಕ್ಡೌನ್ನಿಂದ ದೇಶದ ಕಲುಷಿತ ನಗರಗಳು ಸ್ವಚ್ಛವಾಗಿದ್ದು ದಿಲ್ಲಿಯನ್ನು ಕಂಗೆಡಿಸಿದ್ದ ವಾಯುಮಾಲಿನ್ಯ ಸಮಸ್ಯೆಗೆ ಅನಿರೀಕ್ಷಿತ ರೀತಿಯ ಪರಿಹಾರ ಒದಗಿಸಿದೆ. ಸುಮಾರು 12 ಮಿಲಿಯನ್ ಜನರು ವಾಸಿಸುತ್ತಿರುವ ಸೆಂಟ್ರಲ್ ಮುಂಬೈಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮರಣದ ಪ್ರಮಾಣ 21% ಕಡಿಮೆಯಾಗಿದೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ಒಟ್ಟು ಮರಣದ ಪ್ರಮಾಣದಲ್ಲಿ 67% ಕುಸಿತವಾಗಿದೆ. ಸಾವಿನ ಪ್ರಮಾಣದಲ್ಲಿ ಹೆಚ್ಚಳ ದಾಖಲಾಗಿಲ್ಲದಿದ್ದರೆ ಅಲ್ಲಿ ಕೋವಿಡ್-19 ಸಾವುನೋವು ಹೆಚ್ಚಿರಬಹುದು ಎಂಬ ಅನುಮಾನ ಸರಿಯಲ್ಲ ಎಂದು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಪ್ರೊಫೆಸರ್ ಗಿರಿಧರ ಬಾಬು ಹೇಳಿದ್ದಾರೆ.
ಭಾರತದಲ್ಲಿ ಸುಮಾರು 5,25,000 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 23,077 ಜನರಲ್ಲಿ , ಅಂದರೆ 4% ಜನರಲ್ಲಿ ಸೋಂಕು ದೃಢಪಟ್ಟಿದೆ. ಅಮೆರಿಕದಲ್ಲಿ ಪರೀಕ್ಷೆಗೆ ಒಳಪಟ್ಟವರಲ್ಲಿ 18% ಜನರಲ್ಲಿ ಸೋಂಕು ದೃಢಪಟ್ಟಿದೆ. ನೆದರ್ಲ್ಯಾಂಡಿನಲ್ಲಿ ಸಾಮಾನ್ಯವಾಗಿ ಎಪ್ರಿಲ್ ಪ್ರಥಮ ವಾರದಲ್ಲಿ ಸಂಭವಿಸುವ ಸಾವಿಗಿಂತ ಸುಮಾರು 2,000 ಹೆಚ್ಚು ಸಾವು ಸಂಭವಿಸಿದೆ. ಇಂಡೋನೇಶ್ಯಾದ ರಾಜಧಾನಿ ಜಕಾರ್ತಾದಲ್ಲಿ, ಇಟಲಿಯ ಹಲವು ನಗರಗಳಲ್ಲೂ ಸಾವಿನ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಅಪರಾಧ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದ್ದು ಪ್ರತೀ ದಿನ ಕನಿಷ್ಟ 10 ಮೃತದೇಹವನ್ನು ಇಲ್ಲಿಗೆ ತರಲಾಗುತ್ತಿತ್ತು. ಇದರಲ್ಲಿ ಹೆಚ್ಚಿನವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿತ್ತು. ಆದರೆ ಲಾಕ್ಡೌನ್ ಬಳಿಕ ಇಲ್ಲಿಗೆ ಸಹಜವಾಗಿ ಮೃತಪಟ್ಟವರ ಮೃತದೇಹ ಮಾತ್ರ ತರಲಾಗುತ್ತಿದೆ ಎಂದು ಉತ್ತರಪ್ರದೇಶದಲ್ಲಿ ಗಂಗಾನದಿಯ ದಡದಲ್ಲಿರುವ ಚಿತಾಗಾರದ ಉಸ್ತುವಾರಿ ವಹಿಸಿರುವ ನೀರಜ್ ಕುಮಾರ್ ಹೇಳಿದ್ದಾರೆ.
ಈ ಚಿತಾಗಾರದಲ್ಲಿ ದಿನಾ ಸರಾಸರಿ 30 ಶವದಹನ ಮಾಡಲಾಗುತ್ತಿತ್ತು. ಆದರೆ ಮಾರ್ಚ್ 22ರಿಂದ ಎಪ್ರಿಲ್ 22ರವರೆಗಿನ ಅವಧಿಯಲ್ಲಿ ಕೇವಲ 43 ಶವದಹನ ಮಾತ್ರ ಮಾಡಲಾಗಿದೆ ಎಂದವರು ಹೇಳಿದ್ದಾರೆ.
ಅಪಘಾತ ಪ್ರಕರಣಗಳಲ್ಲೂ ಇಳಿಮುಖ
ಲಾಕ್ಡೌನ್ನಿಂದಾಗಿ ವಾಹನ, ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಅಪಘಾತಗಳ ಪ್ರಕರಣದಲ್ಲೂ ತೀವ್ರ ಇಳಿಮುಖವಾಗಿದ್ದು ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲು ಇದೂ ಒಂದು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ರಸ್ತೆ ಅಪಘಾತ ಪ್ರಕರಣ, ಮದ್ಯಪಾನ ಮತ್ತು ಮಾದಕವಸ್ತು ಸೇವನೆಯಿಂದ ಉಂಟಾಗುವ ಸಾವು, ಹೃದಯಾಘಾತದಿಂದ ಸಂಭವಿಸುವ ಸಾವಿನ ಪ್ರಮಾಣದಲ್ಲೂ ಇಳಿಮುಖವಾಗಿದೆ ಎಂದು ಅಸ್ಸಾಂನ ಆರೋಗ್ಯ ಸಚಿವ ಹಿಮಂತಬಿಸ್ವ ಶರ್ಮ ಹೇಳಿದ್ದಾರೆ. 2018ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಕ್ಕೆ 1,51,400 ಜನ ಬಲಿಯಾಗಿದ್ದರು. ಆದರೆ ಲಾಕ್ಡೌನ್ನಿಂದಾಗಿ ಎಪ್ರಿಲ್ವರೆಗಿನ ಅವಧಿಯಲ್ಲಿ(2018ರ ಇದೇ ಅವಧಿಗೆ ಹೋಲಿಸಿದರೆ) ರಸ್ತೆ ಅಪಘಾತದಲ್ಲಿ 15% ಇಳಿಮುಖವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಲ್ಲಿ ನಿರ್ದೇಶಕರಾಗಿರುವ ಪರೇಶ್ ಕುಮಾರ್ ಗೋಯಲ್ ಹೇಳಿದ್ದಾರೆ.
ಲಾಕ್ಡೌನ್ ಮುಗಿದೊಡನೆ ಹೆಚ್ಚುವ ಸಾಧ್ಯತೆ
ಲಾಕ್ಡೌನ್ ಅವಧಿಯಲ್ಲಿ ಮರಣದ ಪ್ರಕರಣವನ್ನು ವರದಿ ಮಾಡಲು ಸಮಸ್ಯೆಯಾಗಿರುವುದೂ ಮರಣದ ಪ್ರಮಾಣ ಇಳಿಮುಖವಾಗಲು ಕಾರಣವಾಗಿರಬಹುದು. ಲಾಕ್ಡೌನ್ ಮುಗಿದೊಡನೆ ಮರಣದ ಪ್ರಮಾಣದಲ್ಲಿ ಹೆಚ್ಚಳವಾಗಬಹುದು ಎಂದು ಅಹ್ಮದಾಬಾದ್ ನಗರಪಾಲಿಕೆಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ ಭವಿನ್ ಜೋಷಿ ಹೇಳಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಸಾವಿನ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಸರಕಾರ ಕೊರೋನ ವೈರಸ್ ಸಾವಿನ ಪ್ರಮಾಣವನ್ನು ಇರುವುದಕ್ಕಿಂತ ಕಡಿಮೆ ಹೇಳುತ್ತಿದೆ ಎಂದು ಕೆಲವು ವೈದ್ಯರು ಆರೋಪಿಸಿದ್ದಾರೆ. ರೋಗಿಯೊಬ್ಬ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ಘೋಷಿಸಲು ರಾಜ್ಯ ಸರಕಾರ ನೇಮಿಸಿರುವ ಸಮಿತಿಗೆ ಮಾತ್ರ ಅನುಮತಿ ನೀಡಲಾಗಿದೆ.