ಕೊರೋನ ವೈರಸ್ ಮೃತದೇಹದಿಂದ ರೋಗ ಹರಡದು: ಡಾ. ಶಾಂತರಾಮ ಶೆಟ್ಟಿ
ಮಂಗಳೂರು, ಎ. 24: ಕೊರೋನ ಸೋಂಕಿನಿಂದ ಮೃತಪಟ್ಟ ರೋಗಿಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ. ವೈದ್ಯಕೀಯ ವಿಜ್ಞಾನದ ಪ್ರಕಾರ ಕೊರೋನ ಸೋಂಕಿನಿಂದ ಮೃತಪಟ್ಟ ದೇಹದಿಂದ ರೋಗ ಹರಡದು. ಕೊರೋನ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಎಂಜಲಿನ ಹನಿಗಳನ್ನು ಸ್ಪರ್ಶಿಸಿದಾಗ, ಮೂಗು, ಬಾಯಿಯ ಮೂಲಕ ರೋಗ ಹರಡುತ್ತದೆ. ಸತ್ತ ರೋಗಿ ಇನ್ನೊಬ್ಬನಿಗೆ ರೋಗ ಹರಡಿಸಿದ ಉದಾಹರಣೆ ಇಂದಿನ ವೈದ್ಯಕೀಯ ರಂಗದಲ್ಲಿ ಇಲ್ಲ ಎಂದು ನಿಟ್ಟೆ ವಿವಿಯ ಪ್ರೊ. ಛಾನ್ಸಲರ್ ಡಾ. ಎಂ.ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.
ಕೊರೋನದಿಂದ ಮೃತಪಟ್ಟ ರೋಗಿಯ ಶವಸಂಸ್ಕಾರಕ್ಕೆ ದ.ಕ. ಜಿಲ್ಲೆಯಲ್ಲಿ ತಡೆ ಒಡ್ಡಿರುವುದು ನೋವುಂಟು ಮಾಡಿದೆ. ಜಿಲ್ಲೆಯ ಜನತೆ ಬುದ್ಧಿವಂತರು, ಗುಣವಂತರು ಎನಿಸಿಕೊಂಡವರು. ಕೊರೋನ ರೋಗದಿಂದ ಮೃತಪಟ್ಟವರ ಮೃತದೇಹವನ್ನು ಸರಕಾರದ ಮತ್ತು ವೈದ್ಯಕೀಯ ಮಾರ್ಗಸೂಚಿಯಂತೆ ನಡೆಸಲಾಗುತ್ತದೆ. ಜನರು ತಪ್ಪು ತಿಳಿವಳಿಕೆಯಿಂದ ಗೊಂದಲಕ್ಕೆ ಒಳಗಾಗದೆ ಇಂತಹ ಸಂದರ್ಭದಲ್ಲಿ ಸರಕಾರದ ಜತೆ ಕೈಜೋಡಿಸಬೇಕು. ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಇನ್ಯಾರೂ ಮೃತರಾಗದಿರಲಿ. ಒಂದು ವೇಳೆ ಮೃತಪಟ್ಟರೂ ಸರಕಾರದ ನಿಯಮಾವಳಿಯಂತೆ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿ ಎಂದು ಶಾಂತರಾಮ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.





