ಕೇಂದ್ರೀಯ ಹವಾನಿಯಂತ್ರಿತ ಕಟ್ಟಡ ಬಳಕೆ: ಕೇಂದ್ರ ಸರಕಾರ, ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಹೊಸದಿಲ್ಲಿ, ಎ.24: ಕೊರೋನ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸದೆ ನ್ಯಾಯಾಲಯ ಸೇರಿದಂತೆ ಕೇಂದ್ರೀಯ ಹವಾನಿಯಂತ್ರಿತ ಕಟ್ಟಡ(ಸೆಂಟ್ರಲಿ ಏರ್ಕಂಡಿಷನ್ಡ್ ಬಿಲ್ಡಿಂಗ್)ವನ್ನು ಬಳಸಬಾರದು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರ ಮತ್ತು ದಿಲ್ಲಿ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ವಕೀಲ, ದಿಲ್ಲಿ ಬಾರ್ ಕೌನ್ಸಿಲ್ ಅಧ್ಯಕ್ಷ ಕೆಸಿ ಮಿತ್ತಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಡಿಎನ್ ಪಟೇಲ್ ಮತ್ತು ನ್ಯಾಯಾಧೀಶ ಸಿ ಹರಿಶಂಕರ್ ಅವರಿದ್ದ ನ್ಯಾಯಪೀಠ, ಅರ್ಜಿಯ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಕ್ಕೆ ಸೂಚಿಸಿದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬೀಳುವ ವೈರಸ್ನ ಕಣಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಈ ಕಣಗಳು (ಹೈಕೋರ್ಟ್ನಲ್ಲಿ ಅಳವಡಿಸಿರುವಂತಹ) ಕೇಂದ್ರೀಯ ಹವಾನಿಯಂತ್ರಿತ ವ್ಯವಸ್ಥೆಯೊಳಗೆ ಸೇರಿಕೊಂಡು ಪಸರಿಸುತ್ತದೆ . ಹನಿಯಿಂದ ಆಗುವ ಸೋಂಕನ್ನು ಸ್ಯಾನಿಟೈಸರ್ಸ್ ಬಳಸಿ ನಿವಾರಿಸಬಹುದು. ಆದರೆ ಗಾಳಿಯಲ್ಲಿ ಕಣದ ರೂಪದಲ್ಲಿರುವ ವೈರಸ್ ಹವಾನಿಯಂತ್ರಿತ ವ್ಯವಸ್ಥೆಯೊಳಗೆ ಸೇರಿಕೊಂಡರೆ ಕಟ್ಟಡದಲ್ಲಿರುವ ಹಲವು ವ್ಯಕ್ತಿಗಳಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಹವಾನಿಯಂತ್ರಿತ ವ್ಯವಸ್ಥೆಗಳನ್ನು ಸ್ವಚ್ಛಗೊಳಿಸುವ ಮತ್ತು ನಿರ್ವಹಿಸುವ ಕುರಿತು ಇಲಾಖೆ ಎಪ್ರಿಲ್ 22ರಂದು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿದೆ ಎಂದು ಕೇಂದ್ರ ಲೋಕಸೇವಾ ಇಲಾಖೆಯನ್ನು ಪ್ರತಿನಿಧಿಸಿದ ನ್ಯಾಯವಾದಿ ಅಜಯ್ ದಿಗ್ಪಾಲ್ ಹೈಕೋರ್ಟ್ನ ಗಮನಕ್ಕೆ ತಂದರು. ಈ ಮಾರ್ಗದರ್ಶಿ ಸೂತ್ರಗಳನ್ನು ಪರಿಶೀಲಿಸಿ ವಿಚಾರಣೆಯನ್ನು ಮೇ 1ಕ್ಕೆ ನಿಗದಿಗೊಳಿಸುವಂತೆ ಹೈಕೋರ್ಟ್ನ ಮುಖ್ಯ ನೋಂದಣಿ ಅಧಿಕಾರಿಗೆ ಹೈಕೋರ್ಟ್ ಸೂಚಿಸಿತು.