ಬಸ್ರೂರಿನ ಯುವಕ ಅಬುಧಾಬಿಯಲ್ಲಿ ಮೃತ್ಯು

ಉಡುಪಿ, ಎ.25: ಕುಂದಾಪುರ ತಾಲೂಕಿನ ಬಸ್ರೂರು ಮಾರ್ಗೋಳಿ ನಿವಾಸಿ ವೈ.ಮೊಯ್ದಿನ್ ಸಾಹೇಬ್ ಎಂಬವರ ಪುತ್ರ ಇಮ್ತಿಯಾಝ್(37) ಎಂಬವರು ಅಬುಧಾಬಿಯಲ್ಲಿ ಶನಿವಾರ ನಿಧನರಾಗಿದ್ದಾರೆ.
ಕಳೆದ 13 ವರ್ಷಗಳಿಂದ ದುಬೈಯಲ್ಲಿ ಇಂಜಿನಿಯರ್ ಆಗಿ ದುಡಿಯುತ್ತಿದ್ದ ಇವರು, ಅನಾರೋಗ್ಯಕ್ಕೆ ಒಳಗಾಗಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೊಯ್ದಿನ್ ಸಾಹೇಬರ ಆರು(ಐವರು ಪುತ್ರರು ಹಾಗೂ ಓರ್ವ ಪುತ್ರಿ) ಮಕ್ಕಳಲ್ಲಿ ಇಮ್ತಿಯಾಝ್ ಎರಡನೆಯವರು. ತನ್ನ ಪತ್ನಿ, ಇಬ್ಬರು ಪುತ್ರಿಯರೊಂದಿಗೆ ಅಬುಧಾಬಿಯಲ್ಲಿ ನೆಲೆಸಿದ್ದ ಇಮ್ತಿಯಾಝ್, ಆರು ತಿಂಗಳ ಹಿಂದೆ ಊರಿಗೆ ಬಂದು ಅಬುಧಾಬಿಗೆ ಮರಳಿದ್ದರು.
ಮೃತರ ಸಹೋದರರು ಕೂಡ ದುಬೈಯಲ್ಲೇ ಇದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇಮ್ತಿಯಾಝ್ ನ್ಯೂಮೋನಿಯದಿಂದ ಮೃತಪಟ್ಟಿದ್ದು, ಕೊರೋನ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಲಾಕ್ಡೌನ್ನಿಂದಾಗಿ ಮೃತದೇಹವನ್ನು ಭಾರತಕ್ಕೆ ತರಲು ಅವಕಾಶ ಇಲ್ಲದಿರುವುದರಿಂದ ಅಲ್ಲೇ ದಫನ ಮಾಡಲಾಗುವುದು ಎಂದು ಕುಟುಂಬಸ್ಥರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ







