ಮಹೇಂದ್ರ ಕುಮಾರ್ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂತಾಪ
ಉಡುಪಿ, ಎ.25: ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಭಾವ ಪೂರ್ಣ ಸಂತಾಪ ವ್ಯಕ್ತಪಡಿಸಿದೆ.
ಯುವ ಸಮುದಾಯವನ್ನು ಭಾರತದ ಬಹು ಸಂಸ್ಕೃತಿಯ ಮೇಲೆ ಜನಾಂಗ ವಾದ ಮತ್ತು ಹುಸಿ ರಾಷ್ಟ್ರವಾದದ ದಾಳಗಳನ್ನಾಗಿ ಬಳಸಿ ಅದರ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಮತ್ತು ಜನರನ್ನು ನೈಜ ಸಮಸ್ಯೆಗಳಿಂದ ದೂರ ಸರಿಸಲು ಅಲ್ಪಸಂಖ್ಯಾತ ವಿರುದ್ಧ ದ್ವೇಷವನ್ನು ಹಬ್ಬಿಸುತಿದ್ದ ಸಂಘ ಪರಿವಾರದ ಸಂಚನ್ನು ಅರಿತು ಅದರಿಂದ ಹೊರ ಬಂದ ಮಹೇಂದ್ರ ಕುಮಾರ್ ತನ್ನ ಕೊನೆ ಉಸಿರಿನ ತನಕವೂ ಪ್ರಗತಿಪರ ಚಿಂತನೆ ಮತ್ತು ಜಾತ್ಯಾತೀತ ಧೋರಣೆಗಳನ್ನು ಜನರ ನಡುವೆ ಬಿತ್ತಲು ತೀವ್ರ ಪ್ರಯತ್ನ ನಡೆಸಿದ್ದನ್ನು ಬಹುಸಂಸ್ಕೃತ ಸಮಾಜವು ಮರೆಯದು ಎಂದು ಒಕ್ಕೂಟ ತಿಳಿಸಿದೆ.
ಜನವಿರೋಧಿ ಕರಾಳ ಕಾನೂನು ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟದಲ್ಲಿ ಇಡೀ ರಾಜ್ಯ ಸಂಚರಿಸಿ ಜನಜಾಗೃತಿ ಮೂಡಿಸಿದನ್ನು ಮರೆಯ ಲಾಗದು. ಅನಿರೀಕ್ಷಿತವಾಗಿ ನಮ್ಮೆಲ್ಲರನ್ನು ಅಗಲಿದ ದಿವಂಗತ ಮಹೇಂದ್ರ ಕುಮಾರ್ ರನ್ನು ಈ ಸಂದರ್ಭದಲ್ಲಿ ಅವರು ಮಾಡಿದ ಕೆಲಸಗಳನ್ನು ನೆನೆಯುತ್ತಾ ಪ್ರಗತಿ ಪರ, ಜಾತ್ಯಾತೀತ ಚಿಂತನೆಗೆ ಧ್ವನಿಯಾಗುವುದು ಮತ್ತು ಶ್ರಮಿಸುವುದು ಅವರಿಗೆ ಸಲ್ಲಿಸಬಹುದಾದ ನುಡಿ ಗೌರವ ವಾಗಬಹುದೆಂದು ಒಕ್ಕೂಟದ ವಕ್ತಾರ ಸಲಾಹುದ್ದೀನ್ ಅಬ್ದುಲ್ಲಾಹ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.







