ಕೊರೋನ ಪರೀಕ್ಷೆ ವೇಳೆ ಗಲಾಟೆ ಪ್ರಕರಣ: ಶ್ರೀಕಂಠೇಗೌಡ ಸೇರಿ ಐವರಿಗೆ ಜಾಮೀನು

ಮಂಡ್ಯ, ಎ.25: ಪತ್ರಕರ್ತರಿಗೆ ಕೊರೋನ ತಪಾಸಣೆ ಮಾಡುವ ವೇಳೆ ಗುಂಪು ಕಟ್ಟಿಕೊಂಡು ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಅವರ ಪುತ್ರ ಕೃಷಿಕ್ ಗೌಡ ಸೇರಿ ಐವರಿಗೆ ಷರತ್ತುಬದ್ಧ ಜಾಮೀನು ದೊರೆತಿದೆ.
ತಮ್ಮ ನಿವಾಸದಲ್ಲಿ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರು, ತಲಾ 10 ಸಾವಿರ ಬಾಂಡ್ ಪಡೆದು ಐವರಿಗೂ ಜಾಮೀನು ಮಂಜೂರು ಮಾಡಿದರು.
ಏನಿದು ಪ್ರಕರಣ: ತನ್ನ ಮನೆಯ ಸಮೀಪವಿರುವ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೊರೋನ ಪರೀಕ್ಷೆ ನಡೆಯುತ್ತಿದ್ದ ವೇಳೆ ಶ್ರೀಕಂಠೇಗೌಡ ಮತ್ತು ಅವರ ಪುತ್ರ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ನಡೆಸಿದ್ದಾರೆ. ಪತ್ರಕರ್ತರು ಹಾಗೂ ಶ್ರೀಕಂಠೇಗೌಡ, ಅವರ ಪುತ್ರ ಹಾಗೂ ಬಡಾವಣೆಯ ಇತರರ ನಡುವೆ ವಾಗ್ವಾದ, ತಳ್ಳಾಟ ಶುರುವಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಘಟನೆಗೆ ಸಂಬಂಧಿಸಿದಂತೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಟಿ. ಶ್ರೀಕಂಠೇಗೌಡ ಮೊದಲ ಆರೋಪಿಯಾಗಿದ್ದು, ಕೃಷಿಕ್ ಗೌಡ ಎರಡನೇ ಆರೋಪಿಯಾಗಿದ್ದಾನೆ. ಇನ್ನುಳಿದಂತೆ ಚಂದ್ರ ಕಲಾವತಿ, ಜಗದೀಶ್, ರಾಜು ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.





