ಅಬ್ದುರ್ರಹ್ಮಾನ್ ರ ಹಜ್ ಯಾತ್ರೆಯ ಎಲ್ಲಾ ಖರ್ಚು ಭರಿಸಲು ಮುಂದಾದ ಮುನವ್ವರಲಿ ಶಿಹಾಬ್ ತಂಙಳ್
ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರಿಗೆ ಆಹಾರ ನೀಡಿದ ಗೂಡಿನಬಳಿ ನಿವಾಸಿ

ಅಬ್ದುರ್ರಹ್ಮಾನ್
ಬಂಟ್ವಾಳ, ಎ.26: ಹಜ್ ಯಾತ್ರೆಗೆ ತೆರಳಲು ಕೂಡಿಟ್ಟ ಹಣದಿಂದ ಆಹಾರ ಸಾಮಗ್ರಿ ಖರೀದಿಸಿ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬಡವರಿಗೆ ವಿತರಿಸಿದ ತಾಲೂಕಿನ ಗೂಡಿನಬಳಿ ನಿವಾಸಿ ಅಬ್ದುರ್ರಹ್ಮಾನ್ ಅವರಿಗೆ ಹಜ್ ನಿರ್ವಹಿಸಲು ಬೇಕಾದ ಖರ್ಚನ್ನು ಕೇರಳದ ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಭರಿಸಲಿದ್ದಾರೆ ಎಂದು ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಸಂಚಾಲಕ ಇಶ್ರಾರ್ ಗೂಡಿನಬಳಿ ತಿಳಿಸಿದ್ದಾರೆ.
ಕೂಲಿ ಕಾರ್ಮಿಕರಾಗಿರುವ ಅಬ್ದುರ್ರಹ್ಮಾನ್ ಅವರು ಪವಿತ್ರ ಹಜ್ ಯಾತ್ರೆಗೆಂದು ಹಲವು ವರ್ಷಗಳಿಂದ ಹಣ ಕೂಡಿಡುತ್ತಾ ಬಂದಿದ್ದರು. ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು ಕೆಲಸ ಕಾರ್ಯವಿಲ್ಲದೆ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ.
ಲಾಕ್ ಡೌನ್ ನಿಂದ ಜನರು ಸಂಕಷ್ಟದಲ್ಲಿರುವುದು ಮನಗಂಡ ಅಬ್ದುರ್ರಹ್ಮಾನ್ ಅವರು ಹಜ್ ಯಾತ್ರೆಗೆಂದು ತಾನು ಹಲವು ವರ್ಷಗಳಿಂದ ಕೂಡಿಟ್ಟ ಹಣದಿಂದ ಆಹಾರ ಸಾಮಗ್ರಿ ಖರೀದಿಸಿ ವಿತರಿಸಿದ್ದಾರೆ. ಈ ಬಗ್ಗೆ 'ವಾರ್ತಾಭಾರತಿ' ವರದಿ ಮಾಡಿದ್ದು, ನಂತರ ಕೇರಳದ ಕೆಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಮಾಧ್ಯಮಗಳ ವರದಿಗಳನ್ನು ಗಮನಿಸಿದ ಕೇರಳದ ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ತಂಙಳ್ ಅವರು ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಸಂಚಾಲಕ ಇಶ್ರಾರ್ ಗೂಡಿನಬಳಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವರ ಕೇಳಿ, ಅಬ್ದುರ್ರಹ್ಮಾನ್ ಅವರ ಹಜ್ ಯಾತ್ರೆಯ ಖರ್ಚನ್ನು ಭರಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಇಶ್ರಾರ್, ಸೈಯದ್ ಪಾಣಕ್ಕಾಡ್ ಮುನವ್ವರಲಿ ತಂಙಳ್ ಅವರು ದೂರವಾಣಿ ಕರೆ ಮಾಡಿ ಅಬ್ದುಲ್ ರಹ್ಮಾನ್ ಅವರ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ ಅಬ್ದುರ್ರಹ್ಮಾನ್ ಅವರ ಹಜ್ ಯಾತ್ರೆಯ ಖರ್ಚನ್ನು ಭರಿಸುವುದಾಗಿ ತಿಳಿಸಿದರು. ಈ ಬಗ್ಗೆ ಅಬ್ದುರ್ರಹ್ಮಾನ್ ಅವರಲ್ಲಿ ಹೇಳಿಕೊಂಡಾಗ ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.







