ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ನಿರ್ಧಾರದಿಂದ ಹಿಂದಕ್ಕೆ ಸರಿದ ರವೀಂದ್ರ ನಾಯ್ಕ

ಭಟ್ಕಳ : ರಾಜ್ಯದಲ್ಲಿ ಅಂತರ ಜಿಲ್ಲಾ ಮತ್ತು ಅಂತರ ತಾಲೂಕಾ ವಿವಿಧ ಆಸ್ಪತ್ರೆಗೆ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಆಸ್ಪತ್ರೆಗೆ ತೆರಳಲು ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಪಾಸು ನೀಡಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಖಾತೆ ಸಚಿವ ಶ್ರೀರಾಮಲು ಸೂಚನೆ ನೀಡಿರುವುದರಿಂದ, ರೋಗಿಗಳಿಗೆ ತೊಂದರೆ ಉಂಟಾಗುವ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋರೋನಾ ಕೋವಿಡ್-19 ನಿಂದಾಗಿ ಕೆಲವು ಜಿಲ್ಲಾಧಿಕಾರಿಗಳಿಂದ ಅಂತರ ಜಿಲ್ಲಾ ಆಸ್ಪತ್ರೆಗಳಿಗೆ ತುರ್ತು ಹಾಗೂ ಅವಶ್ಯ ಚಿಕಿತ್ಸೆಗೆ ಹೋಗುವ ರೋಗಿಗಳಿಗೆ ತೀವ್ರತರದ ಚಿಕಿತ್ಸೆಗೆ ಸಮಸ್ಯೆ ಉಂಟಾಗುವ ಸಾರ್ವಜನಿಕ ಆಕ್ಷೇಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಜಿಲ್ಲಾಧಿಕಾರಿಗಳಿಗೆ ಮೇಲಿನಂತೆ ನೀಡಿದ ಸೂಚನೆ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲವಾಗುವುದೆಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಮಾಜಿ ಸಚಿವ ಆರ್.ವಿ ದೇಶಪಾಂಡೆ ರೋಗಿಗಳಿಗೆ ಆಗುವ ಅನಾನುಕೂಲತೆ ಕುರಿತು ಇಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಕರ್ನಾಟಕದ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಸಮಸ್ಯೆಗಳ ಅರಿವು ಮೂಡಿಸಲು ತಿಳುವಳಿಕೆ ಪತ್ರ ನೀಡಿ ಸರ್ಕಾರ ಸ್ಪಂಧಿಸದೇ ಇದ್ದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ತಿರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಪ್ರಕ್ರಿಯೇ ಸ್ಥಗಿತಗೋಳಿಸಲಾಗಿದೆ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







