ಹಸಿವಿನಿಂದ ಕಂಗಾಲು: ಖಾಲಿ ತಟ್ಟೆ ಬಾರಿಸಿ ಸರಕಾರದ ವಿರುದ್ಧ ರಾಜ್ಯದ ಟ್ಯಾಕ್ಸಿ ಚಾಲಕರ ಪ್ರತಿಭಟನೆ

Courtesy: deccanherald.com
ಬೆಂಗಳೂರು: ಒಂದು ತಿಂಗಳಿನಿಂದ ಕೆಲಸವಿಲ್ಲದೆ ಕಂಗಾಲಾಗಿರುವ ರಾಜ್ಯದ ಟ್ಯಾಕ್ಸಿ ಚಾಲಕರು ಖಾಲಿ ತಟ್ಟೆಯನ್ನು ಬಡಿಯುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹಸಿವು ಮತ್ತು ಬಡತನದ ಬಗ್ಗೆ ಗಮನೆ ಸೆಳೆಯುವ ಸಲುವಾಗಿ ಈ ವಿಶಿಷ್ಟ ಪ್ರತಿಭಟನೆ ನಡೆಸಲಾಯಿತು.
ಓಲಾ, ಟ್ಯಾಕ್ಸಿ ಫಾರ್ ಶೂರ್, ಉಬರ್ ಚಾಲಕರ ಅಸೋಸಿಯೇಶನ್ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ನೂರಾರು ಚಾಲಕರು ಮನೆಗಳಲ್ಲಿ ಕುಳಿತುಕೊಂಡು ಬಟ್ಟಲು, ಖಾಲಿ ಪಾತ್ರೆಗಳನ್ನು ಬಡಿಯುತ್ತಿರುವ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಸರಕಾರವು ತಮ್ಮ ಬಗ್ಗೆ ಗಮನಹರಿಸುತ್ತಿಲ್ಲ ಎನ್ನುವುದು ಅವರ ಆರೋಪವಾಗಿದೆ.
“ಕರ್ನಾಟಕದ ಲಾಕ್ ಡೌನ್ ಜಾರಿಯಾಗಿ ಇದೀಗ ಒಂದೂವರೆ ತಿಂಗಳಾಗಿದೆ. ಆದರೆ ಸರಕಾರವು ಕೆಲಸವಿಲ್ಲದೆ, ಕನಿಷ್ಠ ಆದಾಯದ ಮೂಲವಿಲ್ಲದೆ ಮನೆಗಳಲ್ಲಿ ಕುಳಿತಿರುವ ಚಾಲಕರ ಸಮಸ್ಯೆಗಳ ಬಗ್ಗೆ ಗಮನ ಹರಿಸಿಲ್ಲ” ಎಂದು ಅಸೋಸಿಯೇಶನ್ ಆರೋಪಿಸಿದೆ.
ಚಾಲಕರು ಮತ್ತು ಅವರ ಕುಟುಂಬಸ್ಥರು ಕಪ್ಪು ಪಟ್ಟಿ ಕಟ್ಟಿಕೊಂಡು ತಟ್ಟೆಗಳನ್ನು ಬಾರಿಸುತ್ತ ಪ್ರತಿಭಟನೆ ನಡೆಸಿದರು.





