ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಪೋಸ್ಟ್ : ಬಂಟ್ವಾಳದಲ್ಲಿ ಮತ್ತೆ ಇಬ್ಬರ ವಿರುದ್ಧ ಕೇಸ್

ಬಂಟ್ವಾಳ, ಎ.27: ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯದ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಇಬ್ಬರ ವಿರುದ್ಧ ಬಂಟ್ವಾಳ ನರಗ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಪಿಎಫ್ಐ ಕೈಕಂಬ ಪರ್ಲ್ಯ ಘಟಕದ ಅಧ್ಯಕ್ಷ ಇಕ್ಬಾಲ್ ಎಂಬವರು ನೀಡಿರುವ ದೂರಿನಂತೆ ನಂದರಬೆಟ್ಟು ನಿವಾಸಿ ರೋಹಿತ್ ಪೂಜಾರಿ ಎಂಬಾತನ ವಿರುದ್ಧ ಹಾಗೂ ಪಿಎಫ್ಐ ಬಿ.ಸಿ.ರೋಡ್ ತಲಪಾಡಿ ಘಟಕದ ಮುಬಾರಕ್ ಎಂಬವರು ನೀಡಿರುವ ದೂರಿನಂತೆ ತಲಪಾಡಿ ನಿವಾಸಿ ಭರತ್ ಶೆಟ್ಟಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಇಬ್ಬರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಒಂದು ಸಮುದಾಯ, ಮಸೀದಿ, ಧರ್ಮಗುರುಗಳು, ಉಪವಾಸದ ಬಗ್ಗೆ ನಿಂದನಾತ್ಮಕ ಪೋಸ್ಟ್ ಹಾಕಿದ್ದಲ್ಲದೆ ದೇಶದಲ್ಲಿ ಕೊರೋನ ವೈರಸ್ ಸೋಂಕು ಹರಡಲು ನಿರ್ದಿಷ್ಟ ಸಮುದಾಯವೇ ಕಾರಣ ಎಂದು ಬಿಂಬಿಸುವ ಪೋಸ್ಟ್ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಂದು ಸಮುದಾಯವನ್ನು ಗುರಿಯಾಗಿಸಿ ನಿಂದನಾತ್ಮಕ ಪೋಸ್ಟ್ ಹಾಕಿವ ಮೂಲಕ ಈ ಇಬ್ಬರು ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿತ್ತಿದ್ದು ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.





