ಮಂಗಳೂರು : ಸುರಕ್ಷಿತ ಅಂತರ ಕಾಪಾಡದೆ ಲಾಕ್ ಡೌನ್ ನಡುವೆ ನೂರಾರು ವಲಸೆ ಕಾರ್ಮಿಕರ ಜಮಾವಣೆ

ಮಂಗಳೂರು, ಎ.28: ಲಾಕ್ಡೌನ್ನಿಂದ ಅಡಕತ್ತರಿಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಪ್ರಕ್ರಿಯೆ ದ.ಕ. ಜಿಲ್ಲೆಯಲ್ಲಿ ಬಿರುಸುಗೊಂಡಿರುವ ಮಧ್ಯೆಯೇ ಮಂಗಳವಾರ ನಗರದ ಪುರಭವನದ ಆವರಣದಲ್ಲಿ ನೂರಾರು ವಲಸೆ ಕಾರ್ಮಿಕರು ಜಮಾಯಿಸಿದ್ದಾರೆ.
ಆಶ್ಚರ್ಯದ ಸಂಗತಿ ಅಂದರೆ ಇಲ್ಲಿ ಸುರಕ್ಷಿತ ಅಂತರವಿರಲಿಲ್ಲ. ಹಲವು ವಲಸೆ ಕಾರ್ಮಿಕರು ಮಾಸ್ಕ್ ಧರಿಸದಿದ್ದುದು ಕಂಡು ಬಂತು. ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಯಾರೋ ನೀಡಿದ ಮಾಹಿತಿ ಮೇರೆಗೆ ಸುಮಾರು 500ಕ್ಕೂ ಅಧಿಕ ಕಾರ್ಮಿಕರು ಮಂಗಳವಾರ ಪುರಭವನದ ಬಳಿ ಜಮಾಯಿಸಿದ್ದರು.
ಸುರಕ್ಷಿತ ಅಂತರವಿಲ್ಲದೆ ಗುಂಪಾಗಿ ವಲಸೆ ಕಾರ್ಮಿಕರು ಸೇರಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಸ್ಥಳಕ್ಕೆ ತೆರಳಿ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡುವ ಬಗ್ಗೆ ವ್ಯವಸ್ಥೆ ಕಲ್ಪಿಸಿದರು. ಈ ವೇಳೆ 'ವಾರ್ತಾಭಾರತಿ' ಜೊತೆ ಮಾತನಾಡಿದ ಸಹಾಯಕ ಆಯುಕ್ತ ಮದನ್ ಮೋಹನ್ ಯಾರ ಸೂಚನೆಯ ಮೇರೆಗೆ ಕಾರ್ಮಿಕರು ಇಲ್ಲಿ ಜಮಾಯಿಸಿದ್ದಾರೆ ಎಂಬುದು ತಿಳಿದಿಲ್ಲ. ಆದರೂ ಅವರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ಸೋಮವಾರ ಮನಪಾ ವ್ಯಾಪ್ತಿಯ 800ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಕಳಿಸಲಾಗಿದೆ. ಇವರು ನೈಜ ವಲಸೆ ಕಾರ್ಮಿಕರು ಹೌದೋ... ಅಲ್ಲವೋ ಎಂದು ಕಾರ್ಮಿಕ ಇಲಾಖೆಯ ಮೂಲಕ ಪರಿಶೀಲನೆ ನಡೆಸಲಾಗುವುದು. ಅವರ ಆರೋಗ್ಯವನ್ನೂ ತಪಾಸಣೆಗೊಳಪಡಿಸಲಾಗುವುದು. ಪ್ರತಿಯೊಂದು ಬಸ್ಸಿನಲ್ಲಿ ಶೇ. 40 ಮೀರದಂತೆ ವಲಸೆ ಕಾರ್ಮಿಕರನ್ನು ಕಳಿಸಲಾಗುವುದು ಎಂದು ತಿಳಿಸಿದ್ದಾರೆ.








.jpeg)

.jpeg)


