ಗ್ರಾಮ ಮಟ್ಟದಲ್ಲಿ ಕೊರೋನ ತೊಲಗಿಸಲು ಸಚಿವ ಕೋಟ ಸೂಚನೆ
ಗ್ರಾಪಂ ಅಧ್ಯಕ್ಷರು-ಪಿಡಿಒ ಜೊತೆ ವೀಡಿಯೋ ಸಂವಾದ
ಮಂಗಳೂರು, ಎ.29: ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕಿನ ಆಯ್ದ 30 ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಜೊತೆಗೆ ಬುಧವಾರ ವಿಡಿಯೋ ಸಂವಾದ ನಡೆಸಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರತಿ ಗ್ರಾಪಂಗಳ ಮಟ್ಟದಲ್ಲಿ ಪಂಚಾಯತ್ ಕಾರ್ಯಪಡೆ ಒಂದು ತಂಡವಾಗಿ, ಕರಾರುವಾಕ್ಕಾಗಿ ಕೆಲಸ ಮಾಡಿದ್ದಲ್ಲಿ ಕರೋನದ ಮೂಲೋಚ್ಚಾಟನೆ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಸಂದರ್ಶಿಸುವ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿ ವರ್ಗ ಹಾಗೂ ಪಿಡಿಒ ಅವರ ತಂಡ ಯೋಜನಾ ಬದ್ಧವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಪ್ರತಿ ಗ್ರಾಮದ, ಪ್ರತಿ ವಾರ್ಡ್ನಲ್ಲಿ ಮನೆ ಮನೆ ಭೇಟಿ ನೀಡುವ ಸಂದರ್ಭ, ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗವು ಕುಟುಂಬದಲ್ಲಿರುವ ಪ್ರತಿ ವ್ಯಕ್ತಿಯನ್ನು ಗಮನಿಸಿ ಕೊರೋನ ಚಹರೆಗಳಿಲ್ಲದಿರುವುದು ಖಚಿತಪಡಿಸಿಕೊಂಡು ಜಿಲ್ಲಾಡಳಿತಕ್ಕೆ ವರದಿ ನೀಡಬೇಕಾದ ಅಗತ್ಯವಿದೆ. ಎಂದ ಸಚಿವ ಕೋಟ, ಬಹುತೇಕ ಗ್ರಾಪಂಗಳಲ್ಲೂ ಉದ್ಯೋಗ ಖಾತ್ರಿ ಆರಂಭಿಸಿದ ಕುರಿತು ಮಾಹಿತಿ ಪಡೆದರಲ್ಲದೆ ಪಡಿತರ ವಿತರಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯವಸ್ಥಿತ ವಾಗಿ ನಿರ್ವಹಿಸಲು ಸಾಧ್ಯವಿದೆ. ಕುಡಿಯುವ ನೀರು, ರಸ್ತೆ ಮುಂತಾದ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಗ್ರಾಪಂಗಳು ಗಮನಹರಿಸಬೇಕೆಂದು ಸಲಹೆ ನೀಡಿದರು.
ಮಳೆಗಾಲ ಆರಂಭವಾಗುವ ಮುನ್ನ ಡೆಂಗ್, ಮಲೇರಿಯಾ ಹಾಗೂ ಚಿಕನ್ಗುನ್ಯದಂತಹ ಖಾಯಿಲೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮ ಜರುಗಿಸುವಂತೆ ಸಚಿವ ಕೋಟ ಕರೆ ನೀಡಿದರು. ಮೇ 15ಕ್ಕೆ ಗ್ರಾಪಂ ಪ್ರತಿನಿಧಿಗಳ ಅವಧಿ ಮುಗಿಯಲಿದೆ. ಆ ಬಳಿಕ ಗ್ರಾಪಂ ಸದಸ್ಯರ ಜವಾಬ್ದಾರಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಕೋಟ, ಈ ಬಗ್ಗೆ ಸರಕಾರದ ಶೀಘ್ರ ನಿರ್ದೇಶನ ನೀಡಲಿದೆ ಎಂದರು.
ವಿಡಿಯೋ ಸಂವಾದದಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ.ಸೆಲ್ವಮಣಿ, ಜಿಲ್ಲಾ ಆರೋಗ್ಯ ಅಧಿಕಾರಿ ರಾಮಚಂದ್ರ ಬಾಯರಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







