ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ: ಹಲವೆಡೆ ಕುಸಿದ ರಸ್ತೆಗಳು, ಮರಗಳು ಧರಾಶಾಹಿ

ಬೆಂಗಳೂರು, ಎ.29: ರಾಜಧಾನಿಯಲ್ಲಿ ಬುಧವಾರ ಬೆಳಗಿನ ಜಾವ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ರಸ್ತೆಗಳು ಜಲಾವೃತಗೊಂಡು ಜನರು ಪರದಾಡುವಂತಾಯಿತು.
ಧಾರಾಕಾರ ಮಳೆಯಿಂದಾಗಿ ಶಾಂತಲಾನಗರ ವಾರ್ಡ್ನ ಹೇಯ್ಸ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಗುಂಡಿ ತೆಗೆಯಲಾಗಿದ್ದು, ಈ ಗುಂಡಿಗೆ ಮಳೆ ನೀರು ತುಂಬಿದ ಪರಿಣಾಮ ರಸ್ತೆ ಸೇರಿದಂತೆ ಅಡ್ಡಗಟ್ಟೆಗಳು ಕುಸಿದ ಪರಿಣಾಮ ಇದರ ಪಕ್ಕದಲ್ಲಿನ ಆರು ಮನೆಗಳು ಕುಸಿಯುವ ಅಪಾಯ ಎದುರಾಗಿದೆ.
ಹಾಗೆಯೇ ಗೋವಿಂದರಾಜನಗರದ ಪಟ್ಟೇಗಾರ ಪಾಳ್ಯದಲ್ಲಿ ರಸ್ತೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಟ್ಟೆಗಾರಪಾಳ್ಯದಿಂದ ಶ್ರೀನಿವಾಸನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲೇ ರಾಜಕಾಲುವೆ ಹಾದು ಹೋಗಿದ್ದು, ಮಳೆಯ ರಭಸಕ್ಕೆ ರಾಜಕಾಲುವೆ ತಡೆಗೋಡೆ ಸಮೇತ ರಸ್ತೆ ಕುಸಿದು ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಸ್ತೆ ಕುಸಿದಿರುವ ಸ್ಥಳಗಳಿಗೆ ಮೇಯರ್ ಗೌತಮ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಯಾವುದೇ ಅನಾಹುತವಾಗದಂತೆ ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳಗ್ಗೆ 5 ಗಂಟೆಯಿಂದ ಆರಂಭವಾದ ಮಳೆ 8 ಗಂಟೆಯವರೆಗೆ ಬಿರುಸಿನ ಗಾಳಿ, ಮಿಂಚು, ಗುಡುಗು ಸಮೇತ ಬಿದ್ದ ಭಾರೀ ಮಳೆಯಿಂದಾಗಿ ನಗರದ ಅನೇಕ ರಸ್ತೆಗಳು ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಇನ್ನು ಕೆಲವು ಕಡೆ ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳು ನೀರಿನಲ್ಲಿ ಮುಳುಗಿಹೋಗಿದ್ದವು. ಇನ್ನು ಬೊಮ್ಮನಹಳ್ಳಿ ಬಳಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನತೆ ಪರದಾಡಿದರು.
ಬುಧವಾರ ಬೆಳಗ್ಗೆಯಿಂದ ಮೆಜೆಸ್ಟಿಕ್, ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಮಡಿವಾಳ, ಜಯನಗರ, ಜೆ.ಪಿ. ನಗರ, ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆಹಳ್ಳಿ, ಹಲಸೂರು, ಇಂದಿರಾ ನಗರ, ಚಾಮರಾಜಪೇಟೆ, ಶ್ರೀರಾಂಪುರ, ಮಲ್ಲೇಶ್ವರ, ರಾಜಾಜಿನಗರ, ಆರ್ಆರ್ ನಗರ, ಮೈಸೂರು ರಸ್ತೆ, ಕೆ.ಆರ್. ಪುರ, ಹೊಸಕೋಟೆ, ಹೆಬ್ಬಾಳ, ಯಲಹಂಕ, ಶಿವಾಜಿನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಿದೆ. ಇದರಿಂದ ಬಹುತೇಕ ರಸ್ತೆಗಳು ಹೊಳೆಯಂತಾಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಇನ್ನು ಬಸವೇಶ್ವರ ನಗರ, ಕೋರಮಂಗಲ ಮತ್ತು ಶೇಷಾದ್ರಿ ಲೇಔಟ್ನಲ್ಲಿ ಮರಗಳು ಧರೆಗುರುಳಿದ್ದವು. ಹವಾಮಾನ ಇಲಾಖೆ ಪ್ರಕಾರ ಬೆಂಗಳೂರು ನಗರದಲ್ಲಿ ಸರಾಸರಿ 44 ಮಿ.ಮೀಟರ್ ಮಳೆಯಾಗಿದೆ. ಇನ್ನು ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ: ಹುಸ್ಕೂರು 110 ಮಿ.ಮೀ., ಕೊನಪ್ಪನ ಅಗ್ರಹಾರ 90, ಹೆಗ್ಗನಹಳ್ಳಿ 88.5, 88.5, ಬೊಮ್ಮನಹಳ್ಳಿ 83.5, ದಾಸರಹಳ್ಳಿ ಪೀಣ್ಯ ಕೈಗಾರಿಕಾ ವಲಯ 83, ಕೋರಮಂಗಲ 81.5, ಬೇಗೂರು ದಕ್ಷಿಣ 80.5, ದೊಮ್ಮಲೂರು 79.5, ವಿದ್ಯಾಪೀಠ 77 ಮಿ.ಮೀ. ಮಳೆ ದಾಖಲಾಗಿದೆ.
ಅಪಘಾತ: ಭಾರೀ ಮಳೆ ಸಂದರ್ಭದಲ್ಲೇ ಹೆಬ್ಬಾಳದ ಬಳಿ ರಸ್ತೆ ಅಪಘಾತ ನಡೆದಿದೆ. ಕ್ಯಾಂಟರ್, ಲಾರಿ ಹಾಗೂ ಪೊಲೀಸ್ ವ್ಯಾನ್ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಕ್ಯಾಂಟರ್ ರಸ್ತೆ ವಿಭಜಕವನ್ನು ದಾಟಿಕೊಂಡು ಮರಕ್ಕೆ ಢಿಕ್ಕಿ ಹೊಡೆದಿದೆ.






.jpg)
.jpg)
.jpg)
.jpg)
.jpg)
.jpg)
.jpg)
.jpg)

