ಚರಂಡಿ ನೀರಿನ ಮೂಲಕವೂ ಕೊರೋನ ಹರಡುವ ಸಾಧ್ಯತೆ: ಪರಿಸರ ತಜ್ಞರಿಂದ ಆತಂಕ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.29: ಕೊರೋನ ಹರಡುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಿರುವ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಒಳಚರಂಡಿ ಮೂಲಕವೂ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಈ ಸಂಬಂಧ ಪರಿಸರ ತಜ್ಞ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಅಧ್ಯಕ್ಷ ಎ.ಎನ್.ಯಲ್ಲಪ್ಪರೆಡ್ಡಿ ನೇತೃತ್ವದ ತಂಡ ಸುದೀರ್ಘ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡುವ ಮೂಲಕ ಅದನ್ನು ಪರಿಶೀಲಿಸುವಂತೆ ಕೋರಿದ್ದಾರೆ.
ರಾಜಧಾನಿಯಲ್ಲಿ ತ್ಯಾಜ್ಯದಲ್ಲಿ ಶೇ.30 ರಷ್ಟು ಒಳಚರಂಡಿ ಮೂಲಕ ನದಿ, ಕಾಲುವೆಗಳು ಸೇರುತ್ತಿವೆ. ನಗರದ ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ಪೀಣ್ಯ, ಯಶವಂತಪುರ, ಕೆಂಗೇರಿ ಉಪನಗರ, ಆರ್.ಆರ್.ನಗರ ಭಾಗದ ಕೈಗಾರಿಕೆ ತ್ಯಾಜ್ಯವೂ ನದಿ ಹಾಗೂ ಕಾಲುವೆಗಳ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ನದಿ ಅಥವಾ ಕೊಳವೆ ಕಾಲುವೆಗಳ ನೀರನ್ನು ಬಳಸುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತಾಗಿ ಅಧ್ಯಯನ ನಡೆಸುವಂತೆ ಸರಕಾರವನ್ನು ಒತ್ತಾಯಿಸಿದ್ದರು. ಅದರಲ್ಲೂ ನಗರದ ಕೊರೋನ ಹಾಟ್ಸ್ಪಾಟ್ಗಳಾದ ಪಾದರಾಯನಪುರ, ಬಾಪೂಜಿನಗರದ ಒಳಚರಂಡಿಗಳು ವೃಷಭಾವತಿ ನದಿ ಸೇರುತ್ತಿದೆ. ಸದ್ಯ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಒಳಚರಂಡಿ ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಕೊಳಚೆ ನೀರು ನೇರವಾಗಿ ನದಿ ಸೇರುತ್ತಿರುವುದರಿಂದ ಈ ಮೂಲಕ ಕೊರೋನ ಹರಡಬಹುದೇ ಎಂಬ ಆತಂಕ ರೈತರಲ್ಲಿದೆ.
ರೈತರ ಆತಂಕದ ಹಿನ್ನೆಲೆಯಲ್ಲಿ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ನೇತೃತ್ವದಲ್ಲಿ ನಿರ್ಮಲಾಗೌಡ, ಡಾ.ನಿಧಿ ಪಾಲಿವಾಲ್, ರಜನಿ ಸಂತೋಷ್, ಸಂಧ್ಯಾ ಬಾಲಸುಬ್ರಹ್ಮಣ್ಯ ಅವರನ್ನು ಒಳಗೊಂಡಿರುವ ತಂಡ ಒಂದು ವರದಿ ಸಿದ್ಧಪಡಿಸಿದೆ. ವರದಿಯಲ್ಲಿ ಕೊರೋನ ಸೋಂಕಿತ ವ್ಯಕ್ತಿಯ ಮಲ ಮೂತ್ರ ಒಳಚರಂಡಿ ಮೂಲಕ ನದಿ ಸೇರುವುದರಿಂದ ಅದು ಮನುಷ್ಯ ಹಾಗೂ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದೆಯಾ ಎಂಬ ಕುರಿತಾಗಿ ವಿವಿಧ ದೇಶಗಳ ಅಧ್ಯಯನ ವರದಿಗಳನ್ನು ಸಂಗ್ರಹಿಸಿ ಉಲ್ಲೇಖಿಸಲಾಗಿದೆ.
ತ್ಯಾಜ್ಯದ ಮೂಲಕ ಹರಡುತ್ತಾ ಕೊರೋನ ವೈರಸ್?: ಕೊರೋನ ಸೋಂಕು ವ್ಯಕ್ತಿಗಳ ಸಂಪರ್ಕದಿಂದ ಹಾಗೂ ಗಾಳಿಯ ಮೂಲಕ ಹರಡುವ ಸಾಧ್ಯತೆಯಿರುತ್ತದೆ ಎಂದು ವೈದ್ಯರು ಹಾಗೂ ತಜ್ಞರು ದೃಢೀಕರಿಸಿದ್ದಾರೆ. ಆದರೆ, ನೀರಿನ ಮೂಲಕ ಹರಡುವ ಸಾಧ್ಯತೆಗಳ ಸಂಬಂಧ ಕೆಲವು ದೇಶಗಳಲ್ಲಿ ನಡೆಸಿರುವ ವರದಿಗಳಿಂದ ತಿಳಿದಿದ್ದು, ಈ ಕುರಿತು ಯಲ್ಲಪ್ಪರೆಡ್ಡಿ ಹಾಗೂ ಅವರ ತಂಡ ಸಮಗ್ರ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ವಿಶ್ವದ ಇತರ ದೇಶಗಳ ಅಧ್ಯಯನ ವರದಿಗಳ ಸಾರಾಂಶವನ್ನು ಸಂಗ್ರಹಿಸಿರುವ ತಂಡ ಇದನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ನೆದರ್ ಲ್ಯಾಂಡ್, ಬೆಲ್ಜಿಯಂ, ಫ್ರಾನ್ಸ್ ಹಾಗೂ ಅಮೆರಿಕಾದಲ್ಲಿ ರೋಗಿಯ ಮಲ ಮೂತ್ರ ಸೇರಿದ ತ್ಯಾಜ್ಯ ನೀರಿನಲ್ಲಿ ಸೋಂಕು ಹರಡುವುದು ಸಾಬೀತಾಗಿದೆ.
ಸಿಟಿಜನ್ ಸೈಂಟಿಫಿಕ್ ಇನ್ವೆಸ್ಟಿಗೇಷನ್ ತಂಡ ಅಧ್ಯಯನದ ಪ್ರಕಾರ ವೃಷಭಾವತಿ, ಮೈಲುಸಂದ್ರ, ಕೆಂಗೇರಿ ಹಾಗೂ ದೊಡ್ಡಬೆಲೆ ಬಳಿ ಇರುವ ತ್ಯಾಜ್ಯ ಸಂಸ್ಕರಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಪರಿಣಾಮ ಕೊರೋನ ಸೋಂಕಿತರ ಮಲಮೂತ್ರ ಒಳಚರಂಡಿ ಸೇರಿ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.







