ಆವರ್ತ ನಿಧಿ ದುರ್ಬಳಕೆ: ಹಣ ವಸೂಲಿ ಮಾಡುವಲ್ಲಿ ಕೃಷಿ ಮಾರಾಟ ಮಂಡಳಿ ಯಶಸ್ವಿ
ಬೆಂಗಳೂರು, ಎ. 29: ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಮೀಸಲಿಟ್ಟ ಸರಕಾರದ 'ಆವರ್ತ ನಿಧಿ'ಗೆ ಸೇರಿದ್ದ ಲಕ್ಷಾಂತರ ರೂಪಾಯಿ ಅವ್ಯವಹಾರ ಸಂಬಂಧದ ಮೊತ್ತವನ್ನು ಮರಳಿ ವಸೂಲಿ ಮಾಡುವಲ್ಲಿ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಡ್ಡಿ ಆಸೆಗಾಗಿ ರಾಜಾಜಿನಗರ ಆಂಧ್ರ ಬ್ಯಾಂಕ್ ಶಾಖೆಯಲ್ಲಿ ಇರಿಸಿದ್ದ 'ಆವರ್ತ ನಿಧಿ'ಯ 200ಕೋಟಿ ರೂ. ಹಣವನ್ನು ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಶಾಖೆ ಮತ್ತು ವಿಶ್ವೇಶ್ವರಪುರದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ತೊಡಗಿಸಲಾಗಿತ್ತು. ಮೇಲ್ಕಂಡ ಬ್ಯಾಂಕುಗಳಲ್ಲಿ ತೊಡಗಿದ್ದ ಠೇವಣಿಯ ಮೊತ್ತದ ಪೈಕಿ 48 ಕೋಟಿ ರೂ.ಹಣವನ್ನು ಮಂಡಳಿಯ ಅಧಿಕಾರಿ ಮತ್ತು ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿ ಬೇರೊಂದು ಖಾತೆಯಲ್ಲಿ ಇರಿಸುವ ಮೂಲಕ ದೊಡ್ಡ ಮೊತ್ತದ ಅವ್ಯವಹಾರ ನಡೆಸಿರುವುದು ಬಯಲಾಗಿತ್ತು.
ಈ ಬಗ್ಗೆ 2020ರ ಜನವರಿ 21ರಂದು ಕೃಷಿ ಮಾರಾಟ ಮಂಡಳಿ ನಿರ್ದೇಶಕರ ಗಮನಕ್ಕೆ ಬಂದಿದ್ದು, ಕೂಡಲೇ ಪ್ರಕರಣ ಸಂಬಂಧ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಿಸಿ, ಮಂಡಳಿ ಅಧಿಕಾರಿ ಸಹಿತ ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.
ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರನ್ನು ಖುದ್ದಾಗಿ ಕೃಷಿ ಮಾರಾಟ ನಿರ್ದೇಶಕರು ಹಲವು ಬಾರಿ ಭೇಟಿ ಮಾಡಿ, ಪತ್ರ ವ್ಯವಹಾರ ನಡೆಸಿ, ವಂಚನೆಗೆ ಒಳಗಾಗಿರುವ ಹಣವನ್ನು ಹಿಂದಿರುಗಿಸುವಂತೆ ಸಿಂಡಿಕೇಟ್ ಬ್ಯಾಂಕಿಗೆ ಒತ್ತಾಯ ಮಾಡಿದ್ದರು. ಇದೀಗ ಸಿಂಡಿಕೇಟ್ ಬ್ಯಾಂಕ್(ಪ್ರಸ್ತುತ ಕೆನರಾ ಬ್ಯಾಂಕ್ನೊಂದಿಗೆ ವಿಲೀನಗೊಂಡಿರುವ) 100 ಕೋಟಿ ರೂ.ಮೊತ್ತವನ್ನು ಬಡ್ಡಿ ಸೇರಿದಂತೆ ಆರ್ಟಿಜಿಎಸ್ ಮೂಲಕ ಆಂಧ್ರ ಬ್ಯಾಂಕ್(ಪ್ರಸ್ತುತ ಯೂನಿಯನ್ ಬ್ಯಾಂಕಿನೊಂದಿಗೆ ವಿಲೀನಗೊಂಡಿರುವ) 'ಆವರ್ತ ನಿಧಿ' ಖಾತೆಗೆ ವರ್ಗಾವಣೆ ಮಾಡಿದೆ. ಸರಕಾರದ ಆವರ್ತ ನಿಧಿ ಮೊತ್ತವನ್ನು ಸುರಕ್ಷಿತವಾದಂತೆ ಆಗಿದೆ.
ವಂಚನೆ: 2001ರಿಂದ 2006ರ ವರೆಗೆ ಕೃಷಿ ಮಾರಾಟ ಮಂಡಳಿಯ ಕಾರ್ಯನಿರ್ವಹಿಸಿದ್ದ ಅಧಿಕಾರಿ ಹೆಸರಿನಲ್ಲಿ ವಂಚನೆ ನಡೆಸಿದ್ದು, ಇದರಲ್ಲಿ ಮಂಡಳಿ ಅಧಿಕಾರಿ, ಬ್ಯಾಂಕ್ ಸಿಬ್ಬಂದಿ ಹಾಗೂ ಕೆಲ ಖಾಸಗಿ ವ್ಯಕ್ತಿಗಳು ಶಾಮೀಲಾಗಿದ್ದು, ಸರಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಇದನ್ನು ಪತ್ತೆ ಮಾಡಿ, ಅಲ್ಪಾವಧಿಯಲ್ಲಿ ಮರಳಿ ವಸೂಲಿ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಆವರ್ತ ನಿಧಿ ಹಣವನ್ನು ದುರ್ಬಳಕೆ ಪ್ರಕರಣ ಸಂಬಂಧ ಕೃಷಿ ಮಾರಾಟ ಮಂಡಳಿ ಅಧಿಕಾರಿ ಸೇರಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿದ್ದು, ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿತ್ತು. ಇದೀಗ ಅಧಿಕಾರಿಗಳು ವಂಚನೆ ಮೊತ್ತವನ್ನು ಮರಳಿ ವಸೂಲಿ ಮಾಡಿದ್ದು, ಆವರ್ತ ನಿಧಿ ಸುರಕ್ಷಿತವಾಗಿದೆ'
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ







