"ಕಾರ್ಮಿಕರ ಅರ್ಜಿ ಮುಂದೂಡಿ ಅರ್ನಬ್ ಗೋಸ್ವಾಮಿ ಅರ್ಜಿ ವಿಚಾರಣೆ ತೀರಾ ತಪ್ಪು"
ಸುಪ್ರೀಂ ಕೋರ್ಟ್ ಬಗ್ಗೆ ಮಾಜಿ ನ್ಯಾ. ಮದನ್ ಲೋಕುರ್
ಮಾಜಿ ನ್ಯಾ. ಮದನ್ ಲೋಕುರ್
ಹೊಸದಿಲ್ಲಿ, ಎ.30: ಕೊರೊನ ಸಂಕಟದ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ಕಾರ್ಯವೈಖರಿಯಿಂದ ತಮಗೆ ತೀವ್ರ ನಿರಾಶೆಯಾಗಿದೆ ಎಂದು ನಿವೃತ್ತ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕುರ್ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಬಗ್ಗೆ ಇತ್ತೀಚಿನವರೆಗೆ ಅದರದ್ದೇ ಭಾಗವಾಗಿದ್ದ ಹಿರಿಯ ಮಾಜಿ ನ್ಯಾಯಾಧೀಶರೊಬ್ಬರು ಬಹಿರಂಗವಾಗಿಯೇ ವ್ಯಕ್ತಪಡಿಸಿರುವ ಪ್ರಪ್ರಥಮ ಅಸಮಾಧಾನ ಇದು. ಅವರು thewire ಗಾಗಿ ಕರಣ್ ಥಾಪರ್ ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು.
"ಅದು ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ" ಎಂದು ಹೇಳಿದ ನ್ಯಾ.ಲೋಕುರ್ ಅವರು "ಭಾರತದ ಸುಪ್ರೀಂ ಕೋರ್ಟ್ ಗೆ ಒಳ್ಳೆಯ ಕೆಲಸ ಮಾಡುವ ಸಾಮರ್ಥ್ಯವಿದೆ. ಆದರೆ ಅವರು ಸರಿಯಾಗಿ ಯೋಚಿಸಬೇಕಾಗಿದೆ, ಆತ್ಮ ವಿಮರ್ಶೆ ನಡೆಸಬೇಕಾಗಿದೆ ಮತ್ತು ಈಗಿರುವುದಕ್ಕಿಂತ ಹೆಚ್ಚು ಸ್ವಯಂ ಪ್ರೇರಣೆಯಿಂದ ಈ ಬಗ್ಗೆ ಚಿಂತಿಸಿ ಮುಂದುವರಿಯಬೇಕಾಗಿದೆ" ಎಂದು ಹೇಳಿದ್ದಾರೆ. ಆರು ವರ್ಷಗಳ ಸೇವೆಯ ಬಳಿಕ 2018ರ ಡಿಸೆಂಬರ್ ನಲ್ಲಿ ನ್ಯಾ. ಲೋಕುರ್ ಅವರು ಸುಪ್ರೀಂ ಕೋರ್ಟ್ ನಿಂದ ನಿವೃತ್ತರಾಗಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ವಲಸಿಗ ಕಾರ್ಮಿಕರ ಹಕ್ಕುಗಳ ಕುರಿತ ಕೋರ್ಟ್ ನ ನಿಲುವು, ಕೆಲವು ಪ್ರಕರಣಗಳಿಗೆ ಆದ್ಯತೆ ನೀಡಿ ತಕ್ಷಣ ವಿಚಾರಣೆಗೆ ತೆಗೆದುಕೊಳ್ಳುವ ಹಾಗು ಕೆಲವನ್ನು ಅನಿರ್ದಿಷ್ಟಾವಧಿ ಮುಂದೂಡುವ ಅದರ ಧೋರಣೆ ಹಾಗು ಸರಕಾರಿ ನೀತಿ ನಿರೂಪಣೆ ಮತ್ತು ಕ್ರಮಗಳ ಕುರಿತ ನ್ಯಾಯಾಂಗ ವಿಮರ್ಶೆಯಲ್ಲಿ ಅದರ ಅಧಿಕಾರ ಚಲಾಯಿಸುವಿಕೆಯಲ್ಲಿರುವ ಕೊರತೆ ಕುರಿತ ಪ್ರಶ್ನೆಗಳ ಬಗ್ಗೆ ಅವರು ಮಾತನಾಡುತ್ತಿದ್ದರು.
ವಲಸಿಗ ಕಾರ್ಮಿಕರ ಹಕ್ಕುಗಳ ಕುರಿತ ಅರ್ಜಿಯ ವಿಲೇವಾರಿಗೆ ಮೂರು ವಾರಗಳನ್ನು ತೆಗೆದುಕೊಂಡ ಸುಪ್ರೀಂ ಕೋರ್ಟ್ ಕ್ರಮದ ಬಗ್ಗೆ " ಹೌದು, ಕೋರ್ಟ್ ಖಂಡಿತವಾಗಿಯೂ ವಲಸಿಗರಿಗೆ ನಿರಾಶೆ ಮೂಡಿಸಿತು" ಎಂದು ನ್ಯಾ. ಲೋಕುರ್ ಹೇಳಿದ್ದಾರೆ. "ವಲಸಿಗರಿಗೆ ಸಹಾಯವಾಗಲು ತನಗೆ ಸರಿಕಂಡ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ಮೃದುವಾಗಿ ಮನವಿ ಮಾಡಿದ ಬಗ್ಗೆ "ಕೋರ್ಟ್ ಅದಕ್ಕಿಂತ ಹೆಚ್ಚು ಮಾಡಬಹುದಿತ್ತು ಮತ್ತು ಮಾಡಬೇಕಿತ್ತು. ಇಂತಹ ಸಂದರ್ಭದಲ್ಲಿ ನಿಮಗೆ ಸರಿಕಂಡ ಕ್ರಮ ತೆಗೆದುಕೊಳ್ಳಿ ಎಂದು ಹೇಳುವುದು ಸೂಕ್ತವಲ್ಲ" ಎಂದವರು ಹೇಳಿದರು.
"ಇದು ಬೇರೆ ಸಮಯದಂತೆ ಹಕ್ಕುಗಳಿಗೆ ಆದ್ಯತೆ ನೀಡುವ ಸಮಯವಲ್ಲ " ಎಂದು ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮುಖ್ಯ ನ್ಯಾಯಾಧೀಶ ಎಸ್ ಎ ಬೋಬಡೆ ಅವರ ಹೇಳಿಕೆ ಬಗ್ಗೆ ಕೇಳಿದಾಗ "ಈಗಿರುವ ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳು ಅಷ್ಟು ಮುಖ್ಯವಲ್ಲ ಎಂದು ಹೇಳುವುದು ಸರಿಯಲ್ಲ" ಎಂದು ನ್ಯಾ. ಲೋಕುರ್ ಹೇಳಿದ್ದಾರೆ. "ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಬದುಕಿನ ಹಕ್ಕನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಎಂದಾದರೆ ಇವತ್ತು ಅದನ್ನು ಹೇಗೆ ನೀವು ನಿರ್ಲಕ್ಷಿಸಲು ಸಾಧ್ಯ" ಎಂದು ಅವರು ಕೇಳಿದ್ದಾರೆ.
ವಲಸಿಗ ಕಾರ್ಮಿಕರ ಅಥವಾ ನರೇಗಾ ಪಾವತಿ ಕುರಿತ ಅರ್ಜಿಗಳನ್ನು ಮುಂದೂಡುತ್ತಾ ಹೋಗಿ ಹಲವು ಎಫ್ ಐ ಆರ್ ಗಳ ವಿರುದ್ಧ ರಕ್ಷಣೆಗಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಮನವಿಯನ್ನು 15 ಗಂಟೆಗಳೊಳಗೆ ವಿಚಾರಣೆಗೆ ಎತ್ತಿಕೊಂಡ ಬಗ್ಗೆ "ಆ ಪ್ರಕರಣ (ಅರ್ನಬ್ ಗೋಸ್ವಾಮಿ ಅರ್ಜಿ) ಅತ್ಯಂತ ತುರ್ತು ವಿಭಾಗಕ್ಕೆ ಸೂಕ್ತ ಅಲ್ಲದೇ ಇರುವಾಗ ಅದನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಂಡಿದ್ದು ಬಹಳ ತೀರಾ ತೀರಾ ತಪ್ಪು" ಎಂದು ನ್ಯಾ. ಲೋಕುರ್ ಹೇಳಿದ್ದಾರೆ. "ಈ ಪರಿಸ್ಥಿತಿಯಲ್ಲಿ ವಲಸಿಗ ಕಾರ್ಮಿಕರು ಮನೆಗೆ ಮರಳುವ ಹಕ್ಕು , ಅವರ ವಸತಿ, ಅವರ ಆಹಾರ, ಅವರ ಕೂಲಿ ಇವುಗಳಿಗಿಂತ ಮುಖ್ಯವಾದುದು ಯಾವುದೂ ಇಲ್ಲ. ಅದು ಅತ್ಯಂತ ನಿರ್ಣಾಯಕವಾಗಿತ್ತು ಮತ್ತು ಅತ್ಯಂತ ತುರ್ತು ಅಗತ್ಯವಾಗಿತ್ತು. ಅದರ ವಿರುದ್ಧ ನೀವು 10 ಎಫ್ ಐ ಆರ್ ವಿರುದ್ಧದ ಪ್ರಕರಣವನ್ನು ಎತ್ತಿಕೊಳ್ಳುತ್ತೀರಿ. ಏನಿದೆ ಅಷ್ಟು ತುರ್ತು? ಆ ಎಫ್ ಐ ಆರ್ ಗಳ ವಿಷಯದಲ್ಲಿ ಪೊಲೀಸರು ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ. ಬಂಧನದ ಸಾಧ್ಯತೆಯೂ ಶೂನ್ಯವಿತ್ತು. ವಲಸಿಗರ, ಬಡವರ ಪರಿಸ್ಥಿತಿಯನ್ನು ಇದಕ್ಕೆ ಹೋಲಿಸಿವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಆ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್ ಕ್ರಮ ತೀರಾ ತೀರಾ ತಪ್ಪು" ಎಂದವರು ಹೇಳಿದ್ದಾರೆ.
ಈ ಆದ್ಯತೆಗಳು ಮುಖ್ಯ ನ್ಯಾಯಮೂರ್ತಿಗಳ ಆದ್ಯತೆ ಹಾಗು ಚಿಂತನೆಯನ್ನು ಪ್ರತಿಬಿಂಬಿಸುತ್ತವೆಯೇ ಎಂಬ ಪ್ರಶ್ನೆಗೆ "ಯಾರಾದರೂ ಜವಾಬ್ದಾರಿ ಹೊರಲೇಬೇಕು. ಒಂದೋ ಮಹಾ ಕಾರ್ಯದರ್ಶಿ ಅಥವಾ ಮುಖ್ಯ ಕಾರ್ಯದರ್ಶಿ.. ಯಾರಾದರೂ ಒಬ್ಬರು ಜವಾಬ್ದಾರಿ ಹೊರಲೇಬೇಕು. ಎಲ್ಲಿ ಏನು ತಪ್ಪಾಗಿದೆ ಎಂದು ಮುಖ್ಯ ನ್ಯಾಯಾಧೀಶರು ತನಿಖೆ ನಡೆಸುವುದು ಒಳ್ಳೆಯದು" ಎಂದು ನ್ಯಾ. ಲೋಕುರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ರಾಜ್ಯ ಮಾನ್ಯತೆ ಬದಲಾವಣೆ ಹಾಗು ಸಿಎಎ ಕುರಿತ ಎಲ್ಲ ಸಾಂವಿಧಾನಿಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಂದೂಡುತ್ತಲೇ ಹೋದ ಬಗ್ಗೆ "ಇದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಈ ಅರ್ಜಿಗಳು ಬಹಳ ದೊಡ್ಡ ಸಂಖ್ಯೆಯ ಜನರ ಮೇಲೆ ಪ್ರಭಾವ ಬೀರುವಂತಹ ಬಹಳ ಮುಖ್ಯ ಅರ್ಜಿಗಳು. ಇದರಿಂದ ಸಮಾಜದ ದೊಡ್ಡ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಅವುಗಳನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳಬೇಕಿತ್ತು. ಏಕೆ ಇವುಗಳಿಗೆ ಆದ್ಯತೆ ನೀಡಲಾಗಿಲ್ಲ ಎಂದು ನನಗೆ ನಿಜವಾಗಿಯೂ ಅರ್ಥವಾಗಲೇ ಇಲ್ಲ" ಎಂದು ನ್ಯಾ. ಲೋಕುರ್ ಹೇಳಿದ್ದಾರೆ.
ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಗಾಗ ಮುಂದೂಡುತ್ತಲೇ ಹೋದ ಬಗ್ಗೆ "ಇದು ಅತ್ಯಂತ ತುರ್ತು ವಿಷಯ. ತಿಂಗಳುಗಟ್ಟಲೆ ಒಬ್ಬನನ್ನು ಯಾವುದೇ ವಿಚಾರಣೆ ಇಲ್ಲದೆ ವಶದಲ್ಲಿಡಲಾಗಿದೆ. ಆ ಕುರಿತ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲೇಬೇಕು. ಅದಕ್ಕೆ ಎಷ್ಟು ಹೊತ್ತು ಬೇಕಾಗುತ್ತದೆ? ಒಂದು ಗಂಟೆ, ಎರಡು ಗಂಟೆ, ಒಂದು ದಿನ ? ಏಕೆ ಅವುಗಳನ್ನು ವಿಚಾರಣೆ ಮಾಡಬಾರದು?" ಎಂದು ನ್ಯಾ. ಲೋಕುರ್ ಹೇಳಿದರು.