ಕೊರೋನಾ ವಿರುದ್ಧ ಸಮರದಲ್ಲಿ ಮೇ ತಿಂಗಳು ನಿರ್ಣಾಯಕ: ಲಾಕ್ಡೌನ್ ವಿಸ್ತರಣೆಗೆ ಆರೋಗ್ಯ ತಜ್ಞರ ಸಲಹೆ
ಹೊಸದಿಲ್ಲಿ, ಎ.20: ದೇಶವನ್ನೇ ತತ್ತರಗೊಳಿಸಿರುವ ಕೊರೋನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹೇರಲಾದ ಲಾಕ್ಡೌನ್ನ ಮೇ 3ರ ಗಡುವು ಸಮೀಪಿಸುತ್ತಿರುವಂತೆಯೇ, ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಮೇ ತಿಂಗಳು ನಿರ್ಣಾಯಕವಾಗಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಿಸಿದ್ದಾರೆ.
ಕೊರೋನ ವೈರಸ್ ವ್ಯಾಪಕವಾಗಿರುವ ಕೆಂಪು ವಲಯಗಳಲ್ಲಿ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವ ಕಾರ್ಯತಂತ್ರದ ಜೊತೆಜೊತೆಗೆ ಸೋಂಕಿನ ಹಾವಳಿ ಇಲ್ಲದ ಹಸಿರುವಲಯಳಲ್ಲಿ ಕೆಲವು ಲಾಕ್ಡೌನ್ ಸಡಿಲಿಕೆಗಳನ್ನು ಮಾಡಲು ಕೇಂದ್ರ ಸರಕಾರ ಚಿಂತಿಸುತ್ತಿದೆ.
ರೈಲ್ವೆ,ವಾಯುಯಾನ, ಅಂತರ್ರಾಜ್ಯ ಬಸ್ ಸೇವೆ, ಮಾಲ್ಗಳು, ಶಾಪ್ಪಿಂಗ್ ಸಂಕೀರ್ಣಗಳು, ಧಾರ್ಮಿಕ ಸ್ಥಳಗಳನ್ನು ಕನಿಷ್ಠ ಪಕ್ಷ ಮೇ ತಿಂಗಳಿಡೀ ಮುಚ್ಚುಗಡೆಯಲ್ಲಿಡಬೇಕೆಂದು ತಜ್ಞರು ಶಿಫಾರಸು ಮಾಡಿದ್ದಾರೆ.
ಈಗ ನಡೆಯುತ್ತಿರುವ ರಾಷ್ಟ್ರವ್ಯಾಪಿ ಲಾಕ್ಡೌನ್ನ್ನು ಮೇ 3ರ ಆನಂತರವೂ ವಿಸ್ತರಿಸಲಾಗುವ ಬಗ್ಗೆ ಕೇಂದ್ರ ಸರಕಾರವು ಈಗಾಗಲೇ ಸ್ಪಷ್ಟ ಸೂಚನೆಯನ್ನು ನೀಡಿದೆ. ಆದರೆ ಕೊರೋನ ಹಾವಳಿ ನಿಯಂತ್ರಣದಲ್ಲಿರುವ ‘ಅನೇಕ ಜಿಲ್ಲೆಗಳಲ್ಲಿ’ ಜನರು ಹಾಗೂ ಸೇವೆಗಳಿಗೆ ಗಣನೀಯ ರಿಯಾಯಿತಿಗಳನ್ನು ನೀಡುವುದಾಗಿ ಅದು ಸುಳಿವು ನೀಡಿದೆ.
ಕಳೆದ ಹದಿನೈದು ದಿನಗಳ ಅವಧಿಯಲ್ಲಿ ದೇಶದಲ್ಲಿ ಕೊರೋನ ಸೋಂಕಿನ ಹಾಟ್ಸ್ಪಾಟ್ ಜಿಲ್ಲೆಗಳ ಸಂಖ್ಯೆ170ರಿಂದ 129ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಹಸಿರು ವಲಯಗಳಲ್ಲಿರುವ ಸೋಂಕು ಮುಕ್ತ ಜಿಲ್ಲೆಗಳ ಸಂಖ್ಯೆ ಕೂಡಾ325ರಿಂದ 307ಕ್ಕೆ ಕುಸಿದಿದೆಯೆಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿದ್ದವು.
ಆದರೆ ಹಾಟ್ಸ್ಪಾಟ್ ಅಲ್ಲದಿದ್ದರೂ ಸೋಂಕಿನ ಪ್ರಕರಣಗಳು ವರದಿಯಾಗಿರುವ ‘ ಕಿತ್ತಳೆ ವಲಯ’ದ ಜಿಲ್ಲೆಗಳ ಸಂಖ್ಯೆ 207ರಿಂದ 297ಕ್ಕೇರಿದೆ.
ಲಾಕ್ಡೌನ್ನಿಂದಾಗಿ ವೈರಸ್ ನಾಶವಾಗುವುದಿಲ್ಲ, ಆದರೆ ಅದು ರೋಗ ಹರಡುವುದನ್ನು ನಿಧಾನಗೊಳಿಸುತ್ತದೆ ಎಂದು ಫಾರ್ಟಿಸ್ ನೊಯ್ಡ ಆಸ್ಪತ್ರೆಯ ಶ್ವಾಸಾಂಗ ಹಾಗೂ ತೀವ್ರ ನಿಗಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಾಜೇಶ್ ಕುಮಾರ್ ಗುಪ್ತಾ ಹೇಳುತ್ತಾರೆ. ಲಾಕ್ಡೌನ್ ಅನ್ನು ಕನಿಷ್ಠ ಪಕ್ಷ ಇನ್ನೂ ಎರಡು ವಾರಗಳವರೆಗಾದರೂ ವಿಸ್ತರಿಸೇಕೆಂದು ಅವರು ಸಲಹೆ ನೀಡಿದ್ದಾರೆ.
ಹಸಿರುಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಅವುಗಳ ಗಡಿಗಳನ್ನು ಸೀಲ್ಡೌನ್ ಮಾಡಬೇಕು ಹಾಗೂ ಅಲ್ಲಿ ಸೀಮಿತ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ದಿಲ್ಲಿಯ ‘ಸರ್ ಗಂಗಾರಾಮ್ ಆಸ್ಪತ್ರೆ’ಯ ಶ್ವಾಸಕೋಶ ತಜ್ಞ ಡಾ. ಅರವಿಂದ ಕುಮಾರ್ ಸಲಹೆ ನೀಡಿದ್ದಾರೆ. ಕೈಗಳನ್ನು ಆಗಾಗ್ಗೆ ಸ್ವಚ್ಚಗೊಳಿಸುವುದು ಹಾಗೂ ಮಾಸ್ಕ್ ಧರಿಸುವುದು ಜನತೆಯ ಜೀವನಶೈಲಿಯ ಭಾಗವಾಗಬೇಕೆಂದು ಅವರು ಅಭಿಪ್ರಾಯಿಸಿದ್ದಾರೆ.