ಉಡುಪಿಯಿಂದ ಉತ್ತರ ಕರ್ನಾಟಕಕ್ಕೆ ತೆರಳಿದ 2117 ವಲಸೆ ಕಾರ್ಮಿಕರು
49 ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ

ಉಡುಪಿ, ಎ. 30: ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯ ನಿರಾಶ್ರಿತರ ಪರಿಹಾರ ಕೇಂದ್ರ, ಸಾಂತ್ವನ ಕೇಂದ್ರ ಹಾಗೂ ಆಶ್ರಯ ತಾಣಗಳಲ್ಲಿ ಕಳೆದ ಒಂದು ತಿಂಗಳಿನಿಂದ ಉಳಿದುಕೊಂಡಿರುವ ಉತ್ತರ ಕರ್ನಾಟಕದ ಒಟ್ಟು 2117 ಮಂದಿ ಕಾರ್ಮಿಕರನ್ನು ಬುಧವಾರ ಜಿಲ್ಲಾಡಳಿತದಿಂದ ವ್ಯವಸ್ಥೆ ಗೊಳಿಸಲಾದ ಒಟ್ಟು 49 ಕೆಎಸ್ಆರ್ಟಿಸಿ ಬಸ್ಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿರುವ ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡಲಾಯಿತು.
ಈ ವಲಸೆ ಕಾರ್ಮಿಕರು ಬಾಗಲಕೋಟೆ, ಕೊಪ್ಪಳ, ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳ ವಿವಿಧ ತಾಲೂಕುಗಳ ತಮ್ಮ ಊರುಗಳಿಗೆ ತೆರಳಿದರು.
ಬಾಗಲಕೋಟೆ ಜಿಲ್ಲೆಯ 1578 ಕಾರ್ಮಿಕರು 37 ಬಸ್ಗಳಲ್ಲಿ, ಕೊಪ್ಪಳ ಜಿಲ್ಲೆಯ 202 ಮಂದಿ ಕಾರ್ಮಿಕರು ನಾಲ್ಕು ಬಸ್ಗಳಲ್ಲಿ ವಿಜಯಪುರದ 31 ಮಂದಿ ಒಂದು ಬಸ್ನಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯ 306 ಮಂದಿ 7 ಬಸ್ಗಳಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು ಎಂದು ಉಡುಪಿಯ ತಹಶೀಲ್ದಾರರು ತಿಳಿಸಿದ್ದಾರೆ.
ಇನ್ನು ಒಂದು ತಿಂಗಳಲ್ಲಿ ಈ ಬಾರಿಯ ಮಳೆಗಾಲ ಪ್ರಾರಂಭಗೊಳ್ಳುವ ಕಾರಣ ತಮ್ಮ ಊರುಗಳಲ್ಲಿ ಕೃಷಿ ಕಾರ್ಯ ನಡೆಸುವ ಸಲುವಾಗಿ ಕೊರೋನ ಲಾಕ್ಡೌನ್ನಿಂದಾಗಿ ಕಳೆದೊಂದು ತಿಂಗಳಿನಿಂದ ಬೇರೆ ಬೇರೆ ಆಶ್ರಯ ತಾಣಗಳಲ್ಲಿ ಉಳಿದುಕೊಂಡಿರುವ ರಾಜ್ಯದೊಳಗಿನ ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ಹೋಗಲು ಸರಕಾರ ಅವಕಾಶ ಕಲ್ಪಿಸಿದೆ. ಪ್ರತೀ ಬಸ್ನಲ್ಲಿ ಶೇ. 40 ಮಂದಿಯಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಮೊದಲಾದ ಅಗತ್ಯ ಕ್ರಮಗಳನ್ನು ಪಾಲಿಸಿ ಕಾರ್ಮಿಕರಿಗೆ ತವರಿಗೆ ಹೋಗುವ ಅವಕಾಶವನ್ನು ನೀಡಲಾಗಿತ್ತು.
ಬುಧವಾರ ಪ್ರಯಾಣಿಸಿದ ಎಲ್ಲಾ ವಲಸೆ ಕಾರ್ಮಿಕರು ಕಳೆದೊಂದು ತಿಂಗಳಿನಿಂದ ಆದಿಉಡುಪಿಯ ಎಪಿಎಂಸಿ ಯಾರ್ಡ್ ಹಾಗೂ ಬೀಡಿನಗುಡ್ಡೆ ಯಲ್ಲಿ ಶಿಬಿರಗಳಲ್ಲಿ ಇದ್ದಂತವರು. ಎಪಿಎಂಸಿ ಯಾರ್ಡ್ನಲ್ಲಿದ್ದ 1065 ಹಾಗೂ ಬೀಡಿನಗುಡ್ಡೆಯಲ್ಲಿದ್ದ 1052 ಮಂದಿ ಪ್ರಯಾಣಿಸಿದವರಲ್ಲಿ ಸೇರಿ ದ್ದಾರೆ. ಇವರೆಲ್ಲರೂ ಜಿಲ್ಲಾಡಳಿತ ವಿಧಿಸಿದ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ಕಂಡುಬಂತು.
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆಗೆ 83 ಮಂದಿ, ಬಾದಾಮಿಗೆ 497 ಮಂದಿ, ಗುಳೇದಗುಡ್ಡಕ್ಕೆ 380 ಮಂದಿ, ಹುನಗುಂದಕ್ಕೆ 402 ಮಂದಿ, ಇಳಕಲ್ಗೆ 177 ಮಂದಿ, ಮುಧೋಳ್ಗೆ 39 ಮಂದಿ ಸೇರಿದಂತೆ ಒಟು್ಟ 1578 ಮಂದಿ ಪ್ರಯಾಣ ಬೆಳೆಸಿದರು. ಇನ್ನು ಕೊಪ್ಪಳ ಜಿಲ್ಲೆಯ ಕೊಪ್ಪಳಕ್ಕೆ 152 ಮಂದಿ, ಕುಷ್ಟಗಿಗೆ 50 ಮಂದಿ ಸೇರಿದಂತೆ 202 ಮಂದಿ, ವಿಜಯಪುರ ಜಿಲ್ಲೆಯ ಮುದ್ದೆಬಿಹಾಳಕ್ಕೆ 31 ಮಂದಿ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಗೆ 217 ಮಂದಿ ಹಾಗೂ ಹರಪನಹಳ್ಳಿಗೆ 89 ಮಂದಿ ಸೇರಿದಂತೆ ಒಟ್ಟು 306 ಮಂದಿ ಪ್ರಯಾಣ ಬೆಳೆಸಿದರು.
ಕಳೆದ ಶನಿವಾರ ಕೆಎಸ್ಆರ್ಟಿಸಿಯಿಂದ ನೀಡಲಾದ ಉಡುಪಿ ಡಿಪೋದ 16 ಹಾಗೂ ಕುಂದಾಪುರ ಡಿಪೋದ ನಾಲ್ಕು ಸೇರಿದಂತೆ ಒಟ್ಟು 20 ಬಸ್ಗಳಲ್ಲಿ ಜಿಲ್ಲೆಯ ಕಾರ್ಕಳ ತಾಲೂಕಿನ ಒಂದು, ಕಾಪು-2, ಉಡುಪಿ-2, ಬ್ರಹ್ಮಾವರ-2, ಕುಂದಾಪುರ-2, ಬೈಂದೂರು-2 ಕೇಂದ್ರಗಳಲ್ಲಿದ್ದ ಒಟ್ಟು 669 ಮಂದಿ ಕಾರ್ಮಿಕರ ಪೈಕಿ 567 ಮಂದಿ ತಮ್ಮ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದರು.
ಕಳೆದ ಶನಿವಾರ ಕೆಎಸ್ಆರ್ಟಿಸಿಯಿಂದ ನೀಡಲಾದ ಉಡುಪಿ ಡಿಪೋದ 16 ಹಾಗೂ ಕುಂದಾಪುರ ಡಿಪೋದ ನಾಲ್ಕು ಸೇರಿದಂತೆ ಒಟ್ಟು 20 ಬಸ್ಗಳಲ್ಲಿ ಜಿಲ್ಲೆಯ ಕಾರ್ಕಳ ತಾಲೂಕಿನ ಒಂದು, ಕಾಪು-2, ಉಡುಪಿ-2, ಬ್ರಹ್ಮಾವರ-2, ಕುಂದಾಪುರ-2, ಬೈಂದೂರು-2 ಕೇಂದ್ರಗಳಲ್ಲಿದ್ದ ಒಟ್ಟು 669 ಮಂದಿ ಕಾರ್ಮಿಕರ ಪೈಕಿ 567 ಮಂದಿ ತಮ್ಮ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದರು. ಈ ಕಾರ್ಮಿಕರು ತಮ್ಮ ತಮ್ಮ ಜಿಲ್ಲೆಗೆ ನಿಯೋಜಿ ಸಿದ್ದ ಬಸ್ಗಳಲ್ಲಿ ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ, ರೋಣ, ವಿಜಯಪುರ, ಗುಲ್ಬರ್ಗಗಳಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಒಂದು ಬಸ್ನ 25 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಸದ್ಯಕ್ಕೆ ಉತ್ತರ ಭಾರತದ ಕಾರ್ಮಿಕರು ಮಾತ್ರ ಈ ಕೇಂದ್ರಗಳಲ್ಲಿ ಉಳಿದು ಕೊಂಡಿದ್ದಾರೆ. ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ 68 ಮಂದಿ ಈಗ ಜಿಲ್ಲೆಯಲ್ಲಿರುವ ಬಗ್ಗೆ ಮಾಹಿತಿ ಇದೆ.
ಜಿಲ್ಲೆಯ ಅಭಿವೃದ್ಧಿಗೆ ತೊಡರುಗಾಲು ?
ಕಳೆದ ಐದಾರು ದಿನಗಳ ಅಂತರದಲ್ಲಿ ಜಿಲ್ಲೆಯಲ್ಲಿರುವ ಉತ್ತರ ಕರ್ನಾಟಕದ 2700ಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಾಸು ತೆರಳಿರುವುದರಿಂದ ಹಾಗೂ ಸದ್ಯಕ್ಕೆ ಅವರು ಜಿಲ್ಲೆಗೆ ಮರಳಿ ಬರುವ ಸೂಚನೆಗಳು (ಕೊರೋನ ಲಾಕ್ಡೌನ್ ಹಾಗೂ ಕೃಷಿ ಕೆಲಸ) ಇಲ್ಲವಾಗಿರುವುದರಿಂದ ಜಿಲ್ಲೆಯಲ್ಲಿ ನಿನ್ನೆಯಿಂದಷ್ಟೇ ಪುನರಾರಂಭಕ್ಕೆ ಹಸಿರು ನಿಶಾನೆ ಪಡೆದಿರುವ ನಿರ್ಮಾಣ ಕಾಮಗಾರಿ ತೀವ್ರ ಸಮಸ್ಯೆಗೆ ಸಿಲುಕುವ ನಿರೀಕ್ಷೆ ಇದೆ.
ಕಳೆದ ಕೆಲವು ದಶಕಗಳಿಂದ ಜಿಲ್ಲೆಯ ವಿವಿಧ ನಿರ್ಮಾಣ ಕಾಮಗಾರಿಗಳು ಉತ್ತರ ಕರ್ನಾಟಕದ ವಲಸೆ ಕಾರ್ಮಿಕರನ್ನೇ ಅವಲಂಬಿಸಿರುವುದು ನಿತ್ಯಸತ್ಯ. ಅದಕ್ಕೆ ಕಾರಣಗಳು ಹಲವು. ಆದರೆ ಈಗ ಬಹುಪಾಲು ಮಂದಿ ಕೊರೋನ ಲಾಕ್ಡೌನ್ ಭೀತಿಯಿಂದ ಊರುಗಳಿಗೆ ಒಮ್ಮೆಗೇ ಮರಳಿರುವುದರಿಂದ ಇದೀಗ ಊರಿನ ಕೂಲಿಕಾರ್ಮಿಕರನ್ನೇ ಸಂಪೂರ್ಣವಾಗಿ ಅವಲಂಬಿಸ ಬೇಕಾಗಿದೆ.
ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಆರಂಭಕ್ಕೆ ಗ್ರೀನ್ ಸಿಗ್ನಲ್ ದಕ್ಕಿದರೂ, ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಗ್ರೀನ್ ಝೋನ್ ಘೋಷಣೆಯಾದ ತಕ್ಷಣ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿ ಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಾರ್ಮಿಕರು ಮಾತ್ರ ತಮಗೆ ಕೆಲಸ ಬೇಡ ಊರಿಗೆ ಕಳುಹಿಸಿ ಕೊಟ್ಟರೆ ಸಾಕು ಎಂದು ಒತ್ತಾಯಿಸಿದ್ದರು. ಈ ಕೂಲಿಕಾರ್ಮಿಕರನ್ನು ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲಾಡಳಿತವೇ ಊಟೋಪಚಾರ ಕೊಟ್ಟು ನೋಡಿಕೊಳ್ಳುತ್ತಿತ್ತು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಳಹಂತದ ಸೈನಿಕರಂತೆ ದುಡಿಯುತಿದ್ದ ವಲಸೆ ಕಾರ್ಮಿಕರ ಅನುಪಸ್ಥಿತಿ, ಜಿಲ್ಲೆಯ ಮಟ್ಟಿಗೆ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬಂತ ಸ್ಥಿತಿ ನಿರ್ಮಾಣ ಮಾಡುವುದೇ ಎಂಬುದನ್ನು ಕಾದುನೋಡಬೇಕಿದೆ.








