ರೆಡ್, ಆರೆಂಜ್, ಗ್ರೀನ್ ವಲಯಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರಕಾರ
ರೆಡ್ ವಲಯದಲ್ಲಿ ಕರ್ನಾಟಕದ 3 ಜಿಲ್ಲೆಗಳು
ಹೊಸದಿಲ್ಲಿ, ಮೇ 1: ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್, ಜಿಲ್ಲೆಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ವಲಯಗಳಾಗಿ ವರ್ಗೀಕರಿಸಿದ್ದಾರೆ.
ಚೇತರಿಕೆಯ ದರ ಏರಿಕೆಯಾದ ಬಳಿಕ ಜಿಲ್ಲೆಗಳನ್ನು ವಿಶಾಲ ಮಾನದಂಡ ಆಧರಿಸಿ ವಿವಿಧ ವಲಯಗಳಾಗಿ ವಿನ್ಯಾಸಗೊಳಿಸಲಾಗಿದೆ. ವರ್ಗೀಕರಣವು ಹಲವು ಅಂಶಗಳನ್ನು ಹೊಂದಿದ್ದು ಪ್ರಕರಣಗಳು, ದ್ವಿಗುಣ ದರ,ಟೆಸ್ಟಿಂಗ್ ವಿಸ್ತರಣೆ ಹಾಗೂ ಕಣ್ಗಾವಲು ಪ್ರತಿಕ್ರಿಯೆಯನ್ನು ಪರಿಗಣಿಸಲಾಗುತ್ತದೆ ಎಂದು ಸುದಾನ್ ಹೇಳಿದ್ದಾರೆ.
ಕೆಲವು ಜಿಲ್ಲೆಗಳನ್ನು ರೆಡ್ ವಲಯದಲ್ಲಿ ಸೇರಿಸಿರುವುದಕ್ಕೆ ಕೆಲವು ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿವೆ. ಆದರೆ ಇದು ಕ್ರಿಯಾತ್ಮಕ ಪಟ್ಟಿ. ಇದನ್ನು ಪ್ರತಿವಾರ ಪರಿಷ್ಕೃತಗೊಳಿಸಲಾಗುವುದೆಂದು ಸುದಾನ್ ಪತ್ರದಲ್ಲಿ ಬರೆದಿದ್ದಾರೆ.
ಪತ್ರದ ಪ್ರಕಾರ ಆಂಧ್ರಪ್ರದೇಶ ಹಾಗೂ ಬಿಹಾರದ ತಲಾ 5 ಜಿಲ್ಲೆಗಳು ರೆಡ್ ವಲಯದಲ್ಲಿವೆ. ದಿಲ್ಲಿಯಲ್ಲಿ 11, ಜಮ್ಮುಕಾಶ್ಮೀರದಲ್ಲಿ 4, ಜಾರ್ಖಂಡ್ನಲ್ಲಿ 1, ಕರ್ನಾಟಕದಲ್ಲಿ 3, ಕೇರಳದಲ್ಲಿ 2, ಮಹಾರಾಷ್ಟ್ರದಲ್ಲಿ 14, ಒಡಿಸ್ಸಾದಲ್ಲಿ 3, ತಮಿಳುನಾಡುನಲ್ಲಿ 12, ಉತ್ತರಪ್ರದೇಶದಲ್ಲಿ 19 ಹಾಗೂ ಪಶ್ಚಿಮ ಬಂಗಾಳದ 10 ಜಿಲ್ಲೆಗಳು ರೆಡ್ ವಲಯದಲ್ಲಿವೆ. ಕಳೆದ 21 ದಿನಗಳಿಂದ ಯಾವುದೇ ಪ್ರಕರಣ ವರದಿಯಾಗದ ಹಾಗೂ ಸೋಂಕು ದೃಢಪಡದ ಜಿಲ್ಲೆಗಳು ಗ್ರೀನ್ ವಲಯದಲ್ಲಿ ಬರುತ್ತದೆ ಎಂದು ಸುದಾನ್ ಸುದ್ದಿ ಸಂಸ್ಥೆ ಎಎನ್ಎಗೆ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್, ಗುಂಟೂರು ಹಾಗೂ ಚಿತ್ತೂರು, ಬಿಹಾರದ ಪಾಟ್ಣಾ, ಮುಂಗೇರ್, ರೋಹಟಸ್ ಹಾಗೂ ಗಯಾ, ಗುಜರಾತ್ನ ಅಹಮದಾಬಾದ್, ಸೂರತ್, ವಡೋದರ, ಗಾಂಧಿನಗರ ರೆಡ್ ವಲಯದಲ್ಲಿವೆ. ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ಮೈಸೂರು, ಕೇರಳದ ಕಣ್ಣೂರು ಹಾಗೂ ಕೊಟ್ಟಾಯಂ, ಮಧ್ಯಪ್ರದೇಶದ ಇಂದೋರ್, ಭೋಪಾಲ್ ಹಾಗೂಉಜ್ಜೈನ್, ಮಹಾರಾಷ್ಟ್ರದ ಮುಂಬೈ, ಪುಣೆ, ಥಾಣೆ , ನಾಸಿಕ್ ಹಾಗೂ ಪಾಲ್ಗರ್ , ಪಂಜಾಬಿನ ಜಲಂಧರ್, ಪಟಿಯಾಲ ಹಾಗೂ ಲೂಧಿಯಾನ, ರಾಜಸ್ಥಾನದ ಜೈಪುರ, ಜೋಧಪುರ್, ಕೋಟ ಹಾಗೂ ಅಜ್ಮೀರ್, ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ರೆಡ್ ವಲಯದಲ್ಲಿದೆ. ಉತ್ತರಪ್ರದೇಶದ ಆಗ್ರಾ, ಲಕ್ನೋ, ಸಹರಾನ್ಪುರ, ವಾರಾಣಸಿ, ಮೀರತ್,ಮಥುರಾ, ಅಲಿಗಡ ಹಾಗೂ ಮುಝಫರ್ ನಗರ ರೆಡ್ ವಲಯದಲ್ಲಿದೆ.