ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಮಾರುಕಟ್ಟೆ ಸೃಷ್ಟಿ

ಉಡುಪಿ, ಮೇ1: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ತಾವು ಬೆವರು ಸುರಿಸಿ ಬೆಳೆದ ಬೆಳೆಗೆ ಮಾರುಕಟ್ಟೆ ಮಾಡಲಾಗದೆ ಆತಂಕಕ್ಕೊಳಗಾಗಿರುವ ರೈತರಿಗೆ ಧೈರ್ಯ ತುಂಬುವ ಕೆಲಸದ ಜೊತೆಗೆ ಬೇರೆ ಬೇರೆ ಮೂಲಗಳಿಂದ ಮಾರುಕಟ್ಟೆಯ ಸಂಪರ್ಕವನ್ನು ಕಲ್ಪಿಸಿಕೊಡುವ ಕೆಲಸವನ್ನು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣದ ಮುಖಾಂತರ ರೈತ ತನ್ನ ಜಮೀನಿನಲ್ಲಿ ಬೆಳೆದ ಉತ್ಪನ್ನಗಳನ್ನು ನೇರವಾಗಿ ಬಳಕೆದಾರರಿಗೆ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದರ ಪ್ರಯೋಜನ ಪಡೆದುಕೊಂಡಿರುವ ರೈತರಲ್ಲೊಬ್ಬರು ಹಿರಿಯಡ್ಕ ಸಮೀಪದ ಸುರೇಶ್ ನಾಯಕ್.
ನಾಯಕ್ ಇವರು ತಮ್ಮ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಹಣ್ಣಿಗೆ ಸೂಕ್ತ ಮಾರುಕಟ್ಟೆ ಸಿಗದೇ ಕಂಗಾಲಾಗಿದ್ದಾಗ ಕೃಷಿ ವಿಜ್ಞಾನ ಕೇಂದ್ರ ಇವರ ಸಹಾಯಕ್ಕೆ ಮುಂದೆ ಬಂತು. ಸಾಮಾಜಿಕ ಜಾಲತಾಣದಲ್ಲಿ ಇವರು ಬೆಳೆದ ಬೆಳೆಯ ಬಗ್ಗೆ ವಿವರಗಳನ್ನು ನೀಡಿ ಮಾಹಿತಿಯನ್ನು ಹರಿಬಿಡಲಾ ಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೈತರು ಮತ್ತು ಉಡುಪಿ ನಗರವಾಸಿಗಳು ನೇರವಾಗಿ ಸುರೇಶ್ ನಾಯಕ್ ಇವರ ಜಮೀನಿನಲ್ಲಿ ಇವುಗಳನ್ನು ಖರೀದಿ ಮಾಡಿದರು. ಇದುವರೆಗೆ ಸುಮಾರು 200 ಟನ್ ಕಲ್ಲಂಗಡಿ ಹಣ್ಣಿನ ಜೊತೆಗೆ ಬೇರೆ ಬೇರೆ ತರಕಾರಿ, ಹಣ್ಣುಗಳನ್ನು ಬೇರೆ ಜಿಲ್ಲೆಯ ರೈತರಿಂದ ಖರೀದಿಸಿ ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಿದ್ದಾರೆ.
ಈ ರೀತಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹಾಯದಿಂದ ಸೃಷ್ಟಿಯಾದ ಮಾರುಕಟ್ಟೆಯಿಂದ ಇತರ ಜಿಲ್ಲೆಯ ರೈತರಿಗೂ ಇವರು ನೆರವು ನೀಡಿದ್ದಾರೆ. ಈ ರೀತಿಯಾದ ನೆರವನ್ನು ಚಿತ್ರದುರ್ಗ ಜಿಲ್ಲೆಯ ಕಾಟನಾಯಕನ ಹಳ್ಳಿಯ ರೈತ ಮಹಿಳೆ ವಸಂತಕುಮಾರಿಯವರಿಗೂ ಇವರೂ ನೀಡಿದ್ದಾರೆ. ವಸಂತ ಕುಮಾರಿ ಅವರು ತಾನು ಬೆಳೆದಿದ್ದ 10 ಟನ್ ಈರುಳ್ಳಿ ಬೆಳೆಯನ್ನು ಮಾರಲಾಗದೆ ಕಂಗಾಲಾಗಿ, ತನ್ನ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಾಗ, ಸಮಸ್ಯೆಯನ್ನು ಅರಿತ ಚಿತ್ರದುರ್ಗದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿದಾಗ, ಸುರೇಶ್ ನಾಯಕ್ ಇವರನ್ನು ಖರೀದಿ ಮಾಡುವಂತೆ ಕೇಳಿಕೊಳ್ಳಲಾಯಿತು.
ಇದಕ್ಕೆ ಒಪ್ಪಿದ ನಾಯಕ್, 10ಟನ್ ಈರುಳ್ಳಿ ಖರೀದಿಸಿ ಸಂಕಷ್ಟದಲ್ಲಿದ್ದ ರೈತ ಮಹಿಳೆಯ ನೆರವಿಗೆ ಧಾವಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮನವಿಗೆ ಸ್ಪಂದಿಸಿ ಕೋವಿಡ್-19ರ ಮಹಾಮಾರಿಯಿಂದ ಮಾರುಕಟ್ಟೆ ಇಲ್ಲದ ಸಮಯ ದಲ್ಲಿ 10 ಟನ್ ಈರುಳ್ಳಿ ಖರೀದಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.








