ಆರೋಗ್ಯ ಸೇತು ಆ್ಯಪ್ ತಂದ ಗೊಂದಲ: ಬೈಂದೂರಿನಲ್ಲಿ ಕೊರೋನ ಪಾಸಿಟಿವ್ ವದಂತಿ
ಉಡುಪಿ, ಎ.2: ಶುಕ್ರವಾರ ಮುಂಜಾನೆ ಬೆಳಗಾವಿಯ ಖಾನಾಪುರದಿಂದ ಆಗಮಿಸಿದ ಬೈಂದೂರು ತಾಲೂಕಿನ ವ್ಯಕ್ತಿಯೊಬ್ಬನಲ್ಲಿ ಕೊರೋನ ವೈರಸ್ ಪಾಸಿಟಿವ್ ಎಂಬ ವದಂತಿ ಶನಿವಾರ ಹಬ್ಬಿದ್ದು, ಜಿಲ್ಲೆಯ ಜನರು ಆತಂಕಗೊಳ್ಳು ವಂತಾಗಿದೆ.
ಬೆಳಗಾವಿಯಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸೇತು ಆ್ಯಪ್ನಲ್ಲಿ ಬಂದ ಮಾಹಿತಿ ಈ ಆತಂಕಕ್ಕೆ ಕಾರಣವಾಯಿತು. ಈ ಮಾಹಿತಿಯನ್ನು ಆರೋಗ್ಯ ಸೇತು ಆ್ಯಪ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು.. ಪಾಸಿಟಿೞ್ ಬಂದ ವ್ಯಕ್ತಿ ಬೈಂದೂರಿನಲ್ಲಿದ್ದಾನೆ ಎಂದು ಇದರಲ್ಲಿ ತಿಳಿಸಲಾಗಿತ್ತು.
ಈ ಬಗ್ಗೆ ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದಾಗ,ಈ ವ್ಯಕ್ತಿಯ ಗಂಟಲು ದ್ರವದ ಮಾದರಿ ಪರೀಕ್ಷೆ ಅಲ್ಲಿ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಬಂದಿದ್ದು ಎಲ್ಲರೂ ನಿರಾಳವಾಗುವಂತಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಆ ವ್ಯಕ್ತಿಯನ್ನು ಇಂದು ಕುಂದಾಪುರ ತಾಲೂಕು ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಸೇರಿಸಲಾಗಿದ್ದು, ಮತ್ತೊಮ್ಮೆ ಆತನ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಅದನ್ನು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದು ಡಿಎಚ್ಓ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬೆಳಗಾವಿಯ ಖಾನಾಪುರದಲ್ಲಿ ಹೊಟೇಲ್ನಲ್ಲಿ ಉದ್ಯೋಗಿಗಳಾದ ಬೈಂದೂರು ತಾಲೂಕು ಮೂಲದ ನಾಲ್ಕೈದು ಮಂದಿ ಶುಕ್ರವಾರ ಮುಂಜಾನೆ 3 ಗಂಟೆಗೆ ಆಗಮಿಸಿದ್ದಾರೆ. ಇವರು ಮೂಲತ: ಶಂಕರನಾರಾಯಣ, ಸಿದ್ಧಾಪುರ ಹಾಗೂ ಸಾಬರಕಟ್ಟೆಯವರೆಂದು ತಿಳಿದುಬಂದಿದೆ.
ಇದೀಗ ಇವ ಒಬ್ಬರನ್ನು ಕುಂದಾಪುರ ಆಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ಸೇರಿಸಿದ್ದರೆ, ಉಳಿದವರನ್ನು ಬೈಂದೂರು ಬಿಸಿಎಂ ಹಾಸ್ಟೆಲ್ನ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.







