ಹೊರ ರಾಜ್ಯಗಳಿಂದ ಬರಲು - ತೆರಳಲು ‘ಸೇವಾಸಿಂಧು’ನಲ್ಲಿ ನೊಂದಾಯಿಸಿಕೊಳ್ಳಿ: ಎಡಿಸಿ
ಉಡುಪಿ, ಮೇ 2: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್ಪಿಸಿ ಸೆಕ್ಷನ್ 144(3)ರಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾ ಗಿದ್ದು, ಈಗಾಗಲೇ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ರಾಜ್ಯ ಸರಕಾರದ ಆದೇಶದಂತೆ, ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳು ಲಾಕ್ಡೌನ್ ಕಾರಣದಿಂದಾಗಿ ಅವರ ಸ್ವಂತ ರಾಜ್ಯಗಳಿಗೆ ತೆರಳಲು ಸಾಧ್ಯವಾಗದೇ ಇಲ್ಲಿಯೇ ಉಳಿದಿದ್ದು, ಅಂತಹ ವರನ್ನು ಅವರ ರಾಜ್ಯಗಳಿಗೆ ಕಳುಸಿಕೊಡುವ ಬಗ್ಗೆ ಅಗತ್ಯಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸ್ತವ್ಯ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳನ್ನು ಅವರವರ ರಾಜ್ಯಗಳಿಗೆ ಮರಳಿ ಹೋಗುವ ನಿಟ್ಟಿನಲ್ಲಿ ಇಂತಹವರು -sevasindhu.karnataka.gov.in-ರಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದುದರಿಂದ ಉಡುಪಿ ಜಿಲ್ಲೆಗೆ ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗಲು ಇಚ್ಛಿಸುವವರು ಮೇಲಿನ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ವೆಬ್ಸೈಟ್ನಲ್ಲಿ ನಿಗದಿತ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕಾಗಿದೆ. ಗುರುತಿನ ಬಗ್ಗೆ ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರು ಒಂದು ದಾಖಲೆ ಹಾಗೂ ವ್ಯಕ್ತಿಯ ಭಾವಚಿತ್ರವನ್ನು (ಪಿಡಿಎಫ್ ಮಾದರಿಯಲ್ಲಿ) ಅಪ್ಲೋಡ್ ಮಾಡಬೇಕು. ಈ ಬಗ್ಗೆ ಯಾವುದಾದರೂ ಮಾಹಿತಿ/ ಸಹಾಯ ಬೇಕಾಗಿದ್ದಲ್ಲಿ ಈ ಕೆಳಗಿನವರನ್ನು ಅಥವಾ ಟೋಲ್ಫ್ರೀ ನಂ.1077ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಸಂಪರ್ಕಿಸಬೇಕಾದ ಅಧಿಕಾರಿಗಳು: ನಾಗರಾಜ್ ರಾವ್, ಜಿಲ್ಲಾ ಅಂಕಿಸಂಖ್ಯಾ ಸಂಗ್ರಹಣಾಧಿಕಾರಿ (ಮೊ:9880278233) ಅಥವಾ ಪ್ರಮೋದ್ ಎಸ್.ಆರ್., ಇ-ಜಿಲ್ಲಾ ಯೋಜನಾ ವ್ಯವಸ್ಥಾಪಕರು (ಮೊ:9482641973) ಇವರನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.







