ಲೌಕ್ಡೌನ್ ಬಳಿಕ ದೇಶದ ಶೇ.73 ವಲಸೆ ಕಾರ್ಮಿಕರಿಗೆ ಸಂಪಾದನೆಯೇ ಇಲ್ಲ!
ಅಸಂಘಟಿತ ಕಾರ್ಮಿಕರು, ದಿನಗೂಲಿ ಕಾರ್ಮಿಕರ ಸ್ಥಿತಿ ಶೋಚನೀಯ ► ಸಮೀಕ್ಷಾ ವರದಿ ಬಹಿರಂಗ
ಹೊಸದಿಲ್ಲಿ,ಮೇ 2: ಕೊರೋನ ವೈರಸ್ ಹರಡುವುದನ್ನು ತಡೆಯಲು ದೇಶದ್ಯಾಂತ ಲಾಕ್ಡೌನ್ ಹೇರಿರುವುದರಿಂದ ಉದ್ಯೋಗವಿಲ್ಲದೆ ಅತಂತ್ರರಾಗಿರುವ ವಲಸೆ ಕಾರ್ಮಿಕರ ಪೈಕಿ ಕೇವಲ ಶೇ.6 ಮಂದಿಗೆ ಮಾತ್ರವೇ ಎಪ್ರಿಲ್ 26ರವರೆಗೆ ಪೂರ್ಣ ವೇತನ ದೊರೆತಿದೆಯೆಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
‘ಸಂಕಷ್ಟದಲ್ಲಿರುವ ಕಾರ್ಮಿಕರ ಕ್ರಿಯಾ ಜಾಲ’ ಎಂಬ ಸಂಘಟನೆ ಈ ಸಮೀಕ್ಷಾ ವರದಿಯನ್ನು ತಯಾರಿಸಿದೆ. ಸಮೀಕ್ಷೆಗಾಗಿ ಸಂಪರ್ಕಿಸಿದ ಶೇ.78 ಮಂದಿಗೆ ಎಪ್ರಿಲ್ 26ರ ಬಳಿಕ ವೇತನವೇ ದೊರೆತಿಲ್ಲವೆಂದು ವರದಿ ಹೇಳಿದೆ. 73 ಮಂದಿ ಕಾರ್ಯಕರ್ತರ ತಂಡವೊಂದು ಈ ಸಮೀಕ್ಷೆಯನ್ನು ನಡೆಸಿತ್ತು. ಸುಮಾರು 19,929 ವಲಸೆ ಕಾರ್ಮಿಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಲಾಕ್ಡೌನ್ ಹೇರಿಕೆಯ ಆನಂತರದ 32 ದಿನಗಳಲ್ಲಿ ಬೀದಿ ವ್ಯಾಪಾರಿಗಳು ಹಾಗೂ ಸೈಕಲ್ರಿಕ್ಷಾ ಚಾಲಕರಂತಹ ಸ್ವ ಉದ್ಯೋಗಿಗಳ ಪೈಕಿಶೇ.99ಕ್ಕೂ ಅಧಿಕ ಮಂದಿಗೆ ಯಾವುದೇ ಹಣ ಸಂಪಾದನೆಯಾಗಿಲ್ಲವೆಂದು ಸಮೀಕ್ಷೆ ಹೇಳಿದೆ.
ಈ ಸ್ವಯಂಸೇವಾ ಸಂಘಟನೆಯು ಸಮೀಕ್ಷೆಗಾಗಿ ಸಂಪರ್ಕಿಸಿದ 16,863 ಕಾರ್ಮಿಕರ ಪೈಕಿ ಶೇ.59 ಮಂದಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ದಿನಗೂಲಿಗಳು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಾರೆ. ಶೇ.11 ಮಂದಿ ಚಾಲಕರು ಹಾಗೂ ಮನೆಕೆಲಸದಾಳುಗಳಂತಹ ಅಸಂಘಟಿತ ದಿನಗೂಲಿ ಕಾರ್ಮಿಕರು ಹಾಗೂ ಶೇ.16 ಮಂದಿ ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ. ಈ ವಲಸೆ ಕಾರ್ಮಿಕರು ಸರಾಸರಿ ದೈನಂದಿನ ಆದಾಯವು 380 ರೂ. ಆಗಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಸಂಘಟನೆಯು ಸಂಪರ್ಕಿಸಿದ ಶೇ.87ರಷ್ಟು ಕಾರ್ಮಿಕರಿಗೆ ಎಪ್ರೀಲ್ 14ರವರೆಗೆ ಅವರ ಮಾಲಕರು ಯಾವುದೇ ವೇತನವನ್ನು ಪಾವತಿಸಿಲ್ಲವಾದರೆ, ಶೇ.13 ಮಂದಿಗೆ ಭಾಗಶಃ ವೇತನ ದೊರೆತಿದೆ. ಎಪ್ರಿಲ್ 26ರವರೆಗೆ ಅವರಲ್ಲಿ ಶೇ.6ರಷ್ಟು ಮಂದಿ ಪೂರ್ಣವೇತನವನ್ನು ಮಾತ್ರವೇ ಪಡೆಯಲು ಸಾಧ್ಯವಾಗಿದ್ದರೆ, ಶೇ.16ರಷ್ಟು ಮಂದಿಗೆ ಭಾಗಶಃ ವೇತನ ದೊರೆತಿದೆ.
ತಮಗೆ ಹಿಂದಿನ ತಿಂಗಳ ವೇತನ ಕೂಡಾ ದೊರೆತಿಲ್ಲವೆಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನ ಕಾರ್ಖಾನೆ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಗೋಳು ತೋಡಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಲಾಕ್ಡೌನ್ ಬಳಿಕ ಊಟ ಹಾಗೂ ವಸತಿಗೆ , ಕಳಪೆ ವ್ಯವಸ್ಥೆಯ ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಳ್ಳಬೇಕಾಗಿದೆ. ಈಗಲೇ ತಮ್ಮ ಊರುಗಳಿಗೆ ತೆರಳಿದಲ್ಲಿ ತಮಗೆ ಬರಬೇಕಾದ ಬಾಕಿ ವೇತನವೂ ಸಿಗದೆಂಬ ಆತಂಕದಿಂದಾಗಿ ಅವರು ನಗರ ಕೇಂದ್ರಗಳಲ್ಲೇ ಉಳಿದುಕೊಂಡಿದ್ದಾರೆಂದು ಸಮೀಕ್ಷಾ ವರದಿ ತಿಳಿಸಿದೆ.