ಎರಡು ದಿನಗಳೊಳಗೆ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಮೇ 3: ಕೋವಿಡ್-19ಗೆ ಸಂಬಂಧಿಸಿ ಉಡುಪಿ ಜಿಲ್ಲೆ ಹಸಿರು ವಲಯದ ವ್ಯಾಪ್ತಿಗೆ ಬಂದಿರುವುದರಿಂದ ಸರಕಾರ ಸಾಕಷ್ಟು ರಿಯಾಯಿತಿಗಳನ್ನು ನೀಡಿದೆ. ಅದರಂತೆ ಎರಡು ದಿನಗಳೊಳಗೆ ಯಾಂತ್ರೀಕೃತ ಮೀನುಗಾರಿಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀನುಗಾರಿಕೆ ಎಲ್ಲರು ಒಟ್ಟಿಗೆ ಹೋಗಿ ಒಟ್ಟಿಗೆ ಬರುವಂತಿಲ್ಲ ಮತ್ತು ಬಂದರುಗಳಲ್ಲಿ ಜನ ಸೇರಲು ಅವಕಾಶ ಇಲ್ಲ. ಆ ಕಾರಣಕ್ಕಾಗಿ ಒಂದು ದಿನಕ್ಕೆ 30 ದೋಣಿಗಳು ಮಾತ್ರ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡಬೇಕು ಮತ್ತು ಒಂದು ಬಾರಿಗೆ 10 ದೋಣಿಗಳು ಅಂತರ ಕಾಯ್ದುಕೊಂಡು ಮೀನುಗಳ ಅನ್ಲೋಡ್ ಮಾಡಬೇಕು ಎಂದರು.
ಬಂದರಿನಲ್ಲಿ ಯಾವುದೇ ಹರಾಜು ಅಥವಾ ಮಾರಾಟ ಪ್ರಕ್ರಿಯೆ ನಡೆಸಬಾರದು. ಅನ್ಲೋಡ್ ಮಾಡಿದ ಮೀನುಗಳನ್ನು ನೇರವಾಗಿ ಲಾರಿಗಳಿಗೆ ತುಂಬಿಸಬೇಕು. ನಂತರ ಅದನ್ನು ಮಾರುಕಟ್ಟೆ ವ್ಯಾಪಾರ ಮಾಡಬೇಕು ಎಂಬ ನಿಯಮಗಳ ಕುರಿತು ಈಗಾಗಲೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿದರು.





