Thewire.in ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಗೆ ಪ್ರತಿಷ್ಠಿತ ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ್ಯ ಪುರಸ್ಕಾರ
ದಿಟ್ಟ ವರದಿಗಾರಿಕೆಗಾಗಿ ಜಗತ್ತಿನಾದ್ಯಂತ 17 ಪತ್ರಕರ್ತರಿಗೆ ಪ್ರಶಸ್ತಿ
ಹೊಸದಿಲ್ಲಿ,ಮೇ 3: ಖ್ಯಾತ ಸುದ್ದಿಜಾಲತಾಣ ‘Thewire.in’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಸೇರಿದಂತೆ 14 ದೇಶಗಳ, 17 ಮಂದಿ ಪತ್ರಕರ್ತರು, ಈ ಸಾಲಿನ ಪ್ರತಿಷ್ಠಿತ ‘ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ್ಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯದ ದಿನವಾದ ರವಿವಾರ ಈ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಬಾರಿಯ ಪ್ರಶಸ್ತಿಗೆ ಕೊರೋನಾ ವೈರಸ್ ಸೋಂಕಿನ ಕುರಿತ ವರದಿಗಾರಿಕೆಗಾಗಿ ಬಂಧಿತರಾದ, ಬೆದರಿಕೆಗೊಳಗಾದ ಅಥವಾ ಬಂಧಿತರಾದ ಪತ್ರರ್ತರನ್ನು ಆಯ್ಕೆ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆಂಬ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ವರಜರಾಜನ್ ವಿರುದ್ಧ ಉತ್ತರಪ್ರದೇಶ ಪೊಲೀಸರು ಕ್ರಿಮಿನಲ್ ಆರೋಪಗಳನ್ನು ದಾಖಲಿಸಿದ ಸಂದರ್ಭದಲ್ಲೇ ಅವರು ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
2015ರಲ್ಲಿ ‘ಡ್ಯುಶೆ ವೆಲ್ಲೆಸ್’ ಈ ಪ್ರಶಸ್ತಿಯನ್ನು ಆರಂಭಿಸಿತ್ತು. ಮಾಧ್ಯಮಗಳಲ್ಲಿ ಮಾನವ ಹಕ್ಕುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾರ ಬದ್ಧತೆಯನ್ನು ಪ್ರದರ್ಶಿಸಿದ ವ್ಯಕ್ತಿಗಳಿಗೆ ಈ ಪುರಸ್ಕಾರವನ್ನು ನೀಡುತ್ತಾ ಬರಲಾಗುತ್ತಿದೆ.
ವರದರಾಜನ್ ಅವರಂತೆ ಈ ಸಲದ ‘ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ ಪ್ರಶಸ್ತಿ’ಗೆ ಆಯ್ಕೆಯಾದವರು ಕೊರೋನಾ ವೈರಸ್ ಹಾವಳಿಗೆ ಸಂಬಂಧಿಸಿ ಆಡಳಿತದ ನಿರ್ಲಕ್ಷತೆ, ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಬಯಲುಗೊಳಿಸಿಸದ್ದಕ್ಕಾಗಿ ತಮ್ಮ ದೇಶಗಳಲ್ಲಿ ವಿವಿಧ ರೀತಿಯ ಕಿರುಕುಳ ಹಾಗೂ ಕಾನೂನುಕ್ರಮಗಳಿಗೆ ಒಳಗಾದವರಾಗಿದ್ದಾರೆ.
ಪ್ರಶಸ್ತಿಗೆ ಪಾತ್ರರಾದ ಇತರರು
ಅನಾ ಲಾಲಿಕ್ (ಸರ್ಬಿಯ), ಬ್ಲಾಝ್ಘಾಗಾ (ಸ್ಲೋವೆನಿಯಾ), ಸೆರ್ಗೆಝ್ ಸಾಝುಕ್(ಬೆಲಾರಸ್), ಎಲ್ಲೆನಾ ಮಿಲಾಶಿನಾ (ರಶ್ಯ), ಡ್ರಾವಿನ್ಸನ್ ರೋಜಸ್ (ವೆನಿಝುವೆಲಾ), ಮುಹಮ್ಮದ್ ಮೊಸಾಯೆದ್ (ಇರಾನ್), ಬಿಯಾಟಿಫಿಕ್ ನಿಗುಂಬ್ವಾಡ (ಝಿಂಬಾಬ್ವೆ), ಡೇವಿಡ್ ಮುಸಿಸಿ ಕಾರ್ಯಂಕೊಲೊ (ಉಗಾಂಡ), ನುರ್ಕಾನ್ ಬಾಯ್ಸಲ್ (ಟರ್ಕಿ), ಇಸ್ಮೆಟ್ ಸಿಗಿಟ್ (ಟರ್ಕಿ), ಫೇರೆಸ್ ಸಾಯೆಗ್ (ಜೋರ್ಡಾನ್), ಸೊವಾನ್ ರಿಥಿ (ಕಾಂಬೋಡಿಯ), ಮಾರಿಯಾ ವಿಕ್ಟೋರಿಯಾ ಬೆಲ್ಟ್ರಾನ್ (ಫಿಲಿಪಿಪ್ಪೈನ್ಸ್), ಚೆನ್ ಕ್ವಿಶಿ (ಚೀನಾ), ಲಿ ಝೆಹುವಾ ಹಾಗೂ ಫಾಂಗ್ ಬಿನಾ (ಚೀನಾ).
ನಿಗೂಢವಾಗಿ ಕಣ್ಮರೆಯಾದ ವುಹಾನ್ ಪತ್ರಕರ್ತನಿಗೆ ಪ್ರಶಸ್ತಿಯ ಗೌರವ
ಪ್ರಶಸ್ತಿ ವಿಜೇತರಲ್ಲೊಬ್ಬರಾದ ಫಾಂಗ್ ಬಿನ್ ಅವರು ಉದ್ಯಮಿಯಾಗಿದ್ದು, ಆನಂತರ ನಾಗರಿಕ ಪತ್ರಕರ್ತನಾಗಿ ಕಾರ್ಯನಿರ್ವಹಿಸಿದ್ದರು. 2020ರ ಆರಂಭದಲ್ಲಿ ಕೊರೋನಾ ವೈರಸ್ ಹಾವಳಿಯ ಉಗಮಕೇಂದ್ರವಾದ ವುಹಾನ್ನಲ್ಲಿ ವರದಿಗಾರಿಕೆಯನ್ನು ಆರಂಭಿಸಿದ್ದರು. ಆಸ್ಪತ್ರೆಯ ಹೊರಗೆ ಹಲವಾರು ಮೃತದೇಹಗಳ ಚೀಲಗಳನ್ನು ಪೇರಿಸಿಟ್ಟ ದೃಶ್ಯಗಳ ವಿಡಿಯೋಗಳನ್ನು ಅವರು ಪ್ರಸಾರ ಮಾಡಿದ್ದರು. ಹಲವಾರು ಸಲ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದರು ಮತ್ತು ಆನಂತರ ನಿಗೂಢವಾಗಿ ಅವರು ಕಣ್ಮರೆಯಾಗಿದ್ದರು.