ಮಂಗಳೂರು: ಸಂಚಾರ ಗಂಟಲು ದ್ರವ ಸಂಗ್ರಹಣ ಕೇಂದ್ರಕ್ಕೆ ಚಾಲನೆ

ಮಂಗಳೂರು, ಮೇ 3: ದ.ಕ. ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಆರೋಗ್ಯ ಇಲಾಖೆಗೆ ಕೋವಿಡ್ ಹಿನ್ನೆಲೆಯಲ್ಲಿ ಸಂಚಾರ ಗಂಟಲು ದ್ರವ ಸಂಗ್ರಹಣ ಕೇಂದ್ರ ವಾಹನವನ್ನು ರವಿವಾರ ಹಸ್ತಾಂತರಿಸಲಾಯಿತು.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದು ರಾಜ್ಯದ ಪ್ರಥಮ ಸಂಚಾರ ಗಂಟಲು ದ್ರವ ಸಂಗ್ರಹಣ ಕೇಂದ್ರವಾಗಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇದರಿಂದ ಗಂಟಲು ದ್ರವ ಸಂಗ್ರಹಣ ಪರೀಕ್ಷೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ದ.ಕ. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 4.5 ಲಕ್ಷ ರೂ. ವೆಚ್ಚದ ಈ ವಾಹನವನ್ನು ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಉಳಿತಾಯದ ಮೊತ್ತದಿಂದ ಖರೀದಿಸಿ ಆರೋಗ್ಯ ಇಲಾಖೆಗೆ ನೀಡಲಾಗಿದೆ. ವಾಹನದಲ್ಲಿ 5 ಜನ ಆಸೀನರಾಗಬಹುದಾಗಿದ್ದು, ಹವಾನಿಯಂತ್ರಿತ ಸೌಲಭ್ಯ ಹೊಂದಿದೆ. ವೈದ್ಯರು ರೋಗಿಯೊಂದಿಗೆ ನೇರ ಸಂಪರ್ಕಕ್ಕೆ ಬರುವುದಿಲ್ಲ. ರೋಗಿಯೇ ಹೊರಗೆ ನಿಂತು ಗಂಟಲದ್ರವ ಸಂಗ್ರಹಿಸಬಹುದಾಗಿದೆ. ಅಲ್ಲದೆ ಪಿಪಿಇ ಕಿಟ್ ಬಳಸುವ ಅಗತ್ಯ ಇರುವುದಿಲ್ಲ. ರೋಗಿಯೊಂದಿಗೆ ವೈದ್ಯರು ಸಂಭಾಷಣೆ ಮಾಡಲು ಇಂಟರ್ ಕಾಂ ಮತ್ತು ಧ್ವನಿವರ್ಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಇದರಲ್ಲಿ ಆರೋಗ್ಯ ಮಾಹಿತಿ, ಘೋಷಣೆಗಳನ್ನು ಕೂಡ ಮಾಡಬಹುದಾಗಿದೆ. ವಾಹನದ ಸುತ್ತಲೂ ಆರೋಗ್ಯ ಸಂದೇಶಗಳ ಫಲಕಗಳನ್ನು ಅಳವಡಿಸಲಾಗಿದೆ.







