ಈದ್ಗಾಗಿ ಬಟ್ಟೆ ಖರೀದಿಸುವ ಬದಲು ದಾನ ಮಾಡಿ: ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಮನವಿ
ಉಡುಪಿ, ಮೇ 4: ಸಾಂಕ್ರಾಮಿಕ ರೋಗವಾಗಿರುವ ಕೊರೊನ ವೈರಸ್ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಈದ್ ಹೆಸರಲ್ಲಿ ಬಟ್ಟೆ ಖರೀದಿಗಾಗಿ ಹೊರಹೋಗುವುದು ಅಪಾಯಕಾರಿಯಾಗಿದೆ. ಇಡೀ ಪ್ರಪಂಚವೇ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ನಮ್ಮಲ್ಲಿರುವ ಹಣವನ್ನು ಬಡವರಿಗೆ ದಾನ ಮಾಡಲು ಮತ್ತು ಆಹಾರಕ್ಕಾಗಿ ವಿನಿಯೋಗಿಸಬೇಕು ಇದ್ದುದರಲ್ಲಿ ಒಳ್ಳೆಯ ಬಟ್ಟೆಗಳನ್ನು ತೊಟ್ಟು ಈದ್ ಆಚರಿಸುವಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಮನವಿ ಮಾಡಿದೆ.
ಯಾವುದೇ ಕಾರಣಕ್ಕೂ ತನ್ನಿಂದಾಗಿ ಸ್ವಂತ ಜೀವಕ್ಕೂ, ಸಮೂಹಕ್ಕೂ ವಿನಾಶ ತಂದೊಡ್ಡುವ ಕೆಲಸವನ್ನು ನಾವು ಮಾಡಬಾರದು. ಆರ್ಥಿಕವಾಗಿ ಜರ್ಜರಿತ ವಾಗಿರುವ ಈ ಸಂದರ್ಭದಲ್ಲಿ ಹೊಸ ಉಡುಪುಗಳ ಅವಶ್ಯಕತೆ ನಮಗೆ ಇದೆಯೇ ಎಂದು ಚಿಂತಿಸಬೇಕು ಎಂದು ಜಮಾಅತ್ ತಿಳಿಸಿದೆ.
ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಹೊರಹೋಗಲ್ಲ, ಶಾಪಿಂಗ್ ಮಾಡಲ್ಲ ಎಂಬ ಪ್ರತಿಜ್ಞೆಗೆ ಬದ್ದರಾಗಬೇಕು ಎಂದು ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು, ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು, ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





